ಯಾರನ್ನೂ ವಿರೋಧ ಮಾಡಿ ಕನ್ನಡ ಬೆಳೆಸೋ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

– ಬೆಳಗಾವಿಯಲ್ಲಿ ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು

ಬೆಳಗಾವಿ: ಯಾರನ್ನು ಕೂಡ ವಿರೋಧ ಮಾಡಿ ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಕನ್ನಡಪರ ಹೋರಾಟಗಾರರಿಗೆ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಇಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ತೇಜಸ್ವಿ ಸೂರ್ಯ ಬಂದ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಮರಾಠಿಗರಿದ್ದಾರೆ ಅಂತ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆರು ಕೋಟಿ ಕನ್ನಡಿಗರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಜವಾಬ್ದಾರಿ. ಎಲ್ಲ ಜಾತಿ, ಎಲ್ಲ ಸಮುದಾಯದ ಏಳಿಗೆ ಸರ್ಕಾರದ ಕರ್ತವ್ಯ. ಆ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಬಂದ್ ಕರೆಯುವಂತಹದ್ದು ಸರಿಯಲ್ಲ, ಬಂದ್ ಕಲ್ಚರ್ ಬಂದ್ ಆಗಬೇಕು. ಬಂದ್ ಮಾಡುವುದನ್ನ ಈಗಾಗಲೇ ನಿಲ್ಲಿಸಿದ್ದಾರೆ. ಇಂದಿನ ಬಂದ್ ಯಾವುದೇ ಫಲ ಆಗುವುದಿಲ್ಲ. ಬಂದ್ ಕಲ್ಚರ್ ಈಗಾಗಲೇ ನಿಂತುಹೋಗಿದೆ. ಸರ್ಕಾರದ ಜೊತೆಗೆ ಕುಳಿತು ಚರ್ಚೆ ಮಾಡುವಂತೆ ಕನ್ನಡ ಸಂಘಟನೆ ಮುಖಂಡರಿಗೆ ಮನವಿ ಮಾಡಿಕೊಂಡ ಸೂರ್ಯ, ಸರ್ಕಾರ ಮತ್ತು ಯಡಿಯೂರಪ್ಪ ನಿಮ್ಮ ಮಾತುಗಳನ್ನ ಕೇಳಲು ತಯಾರಿದೆ. ಕನ್ನಡದ ಕೆಲಸವನ್ನ ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.

ಬೆಳಗಾವಿಯ ರೇಲ್ವೆ ನಿಲ್ದಾಣದಲ್ಲಿ ಬಂದಿಳಿದ ತೇಜಸ್ವಿ ಸೂರ್ಯ ಅವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಬೆಳಗಾವಿ ಜಿಲ್ಲಾ ಬಿಜೆಪಿ ಯುವ ಘಟಕ ಹೂಗೂಚ್ಛ ನೀಡಿ ಸ್ವಾಗತಿಸಿತ್ತು. ಇದೇ ವೇಳೆ ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬಿದ್ದ ಪ್ರಸಂಗವೂ ನಡೆಯಿತು.

Comments

Leave a Reply

Your email address will not be published. Required fields are marked *