ಯತ್ನಾಳ್‍ಗೆ ತಲೆ ಸರಿಯಿಲ್ಲ, ನಾವೇ ನಿಮ್ಹಾನ್ಸ್‌ಗೆ ಸೇರಿಸಿ ಚಿಕಿತ್ಸೆ ಕೊಡಿಸ್ತೇವೆ: ವಾಟಾಳ್

ಕೊಪ್ಪಳ: ಯತ್ನಾಳ್‍ಗೆ ತಲೆ ಸರಿಯಿಲ್ಲ ನಾವೇ ನಿಮ್ಹಾನ್ಸ್‌ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ರೋಲ್‍ಕಾಲ್ ಕನ್ನಡಪರ ಸಂಘಟನೆಗಳ ಬಂದ್‍ಗೆ ಕಿವಿಗೊಡಬೇಕಿಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್‍ಗೆ ತಲೆ ಸರಿಯಿಲ್ಲ, ನಾವೇ ನಿಮ್ಹಾನ್ಸ್‌ಗೆ  ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ಈ ಹಿಂದೆ ಯಡಿಯೂರಪ್ಪ ಅವರನ್ನೇ ಬೈದಂತವರು, ಅವರ ತಂದೆ ತಾಯಿಗೂ ಬೈಯೋದಿಲ್ಲ ಎಂದು ಏನು ಗ್ಯಾರಂಟಿ ಎಂದು ಹರಿಹಾಯ್ದರು.

ಕನ್ನಡ ಒಕ್ಕೂಟದ ಮುಖಂಡ ಸಾ.ರಾ.ಗೋವಿಂದ್ ಮಾತನಾಡಿ, ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಅಲ್ಲ ಸಾವಿರ ಕೋಟಿ ರೂ. ಅನುದಾನ ನೀಡಿ. 50 ಕೋಟಿಯಲ್ಲಿ ನಿಕ್ಕರ್ ಪಂಚೆ ತೆಗೆದುಕೊಳ್ಳಕ್ಕೆ ಆಗಲ್ಲ, ನಾವು ಮರಾಠಿಗರ ಮತ್ತು ಬೇರೆ ಯಾವ ಜಾತಿ ಸಮುದಾಯದ ವಿರುದ್ಧ ಇಲ್ಲ. ಮರಾಠಿಗರ ಶಿಕ್ಷಣ, ಅಭಿವೃದ್ಧಿಗಾಗಿ ಸಾವಿರ ಕೋಟಿ ಕೊಟ್ಟು ಅವರನ್ನ ಅಭಿವೃದ್ಧಿ ಮಾಡಿ ನಮಗೆ ವಿರೋಧವಿಲ್ಲ ಆದರೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಬೇಡ. ಇದರಿಂದ ನಾಳೆ ತಮಿಳು, ತೆಲುಗು, ಮಲಯಾಳಿ, ಮಾರ್ವಾಡಿಯವರು ಬಂದು ಪ್ರಾಧಿಕಾರ ಕೇಳುತ್ತಾರೆ. ಹೀಗಾಗಿ ಕೂಡಲೇ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕೈ ಬಿಡಬೇಕೆಂದು ಆಗ್ರಹಿಸಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದನ್ನು ಖಂಡಿಸಿ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕೊಪ್ಪಳದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಯಾವ ಕಾರಣಕ್ಕೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ ತಿಳಿಯುತ್ತಿಲ್ಲ. ಕೇವಲ ಬಸವಕಲ್ಯಾಣ ಚುನಾವಣೆಗಾಗಿ ಮರಾಠರ ಮತ ಓಲೈಸಲು ಮರಾಠ ಪ್ರಾಧಿಕಾರ ಮಾಡಿ ಕನ್ನಡಿಗರನ್ನ ಕೆರಳಿಸುವಂತೆ ಮಾಡಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರಚನೆ ಮಾಡಿದ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ಕೈ ಬಿಡಬೇಕು ಇಲ್ಲದಿದ್ದರೆ ಬರುವ ಡಿ.5 ರಂದು ಸಂಪೂರ್ಣ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.

Comments

Leave a Reply

Your email address will not be published. Required fields are marked *