– ಬಿಎಸ್ವೈ ನನ್ನ ತಂದೆಯಂತೆ
– ಸರ್ಕಾರ ರಚನೆಗೆ ಹಣ ಖರ್ಚು ಮಾಡಿಲ್ಲ
– ನಮ್ಮ ರಾಜಕೀಯ ನಾಯಕರು ಬಿಎಸ್ವೈ
ದಾವಣಗೆರೆ: ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿಕೊಟ್ಟವರು. ದೆಹಲಿಯಲ್ಲಿ ಅವರ ವಿರುದ್ಧ ದೂರು ನೀಡಿಲ್ಲ, ಅವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಯಡಿಯೂರಪ್ಪನವರ ವಿರುದ್ಧ ನಾನು ದೂರು ನೀಡಿಲ್ಲ. ಯಡಿಯೂರಪ್ಪ ನನಗೆ ರಾಜಕೀಯ ಪಾಠ ಹೇಳಿಕೊಟ್ಟವರು. ಅವರ ವಿರುದ್ದ ಯಾವತ್ತು ನಾನು ನಡೆದುಕೊಂಡಿಲ್ಲ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಹುಳ ಬೀಳುತ್ತೆ. ಯಡಿಯೂರಪ್ಪ ಯಾವಾಗಲೂ ನಮ್ಮ ರಾಜಕೀಯ ನಾಯಕರು. ಪಕ್ಷದ ಉಸ್ತುವಾರಿಗಳಿಗೆ ರಾಜ್ಯದ ವಾಸ್ತವ ಸ್ಥಿತಿಯನ್ನು ಗಮನಕ್ಕೆ ತಂದಿದ್ದೇನೆ ಹೊರತು ನಾನು ಅವರ ಕುರಿತಾಗಿ ದೂರು ನೀಡಿಲ್ಲ ಎಂದು ತಿಳಿಸಿದರು.

ಪಕ್ಷದ ಶಿಸ್ತಿನ ಸಿಪಾಯಿ ನಾನು, ನಾನು ಬಂಡಾಯ ಅಲ್ಲ, ಅಸಮಾಧಾನ ಇಲ್ಲ. ಯಡಿಯೂರಪ್ಪ ನನ್ನ ತಂದೆಯ ಸಮಾನ. ದೆಹಲಿ ನಾಳೆ ಹೋಗ್ತಾ ಇದ್ದೇನೆ, ಹೋಗುವ ಮುನ್ನ ಶಾಸಕರ ಸಭೆ ಮಾಡುತ್ತೇನೆ. ಎಲ್ಲಾ ಶಾಸಕರು ನನಗೆ ಕಾಲ್ ಮಾಡ್ತಾ ಇದ್ದಾರೆ. ಎಲ್ಲರೂ ಸೇರಿ ಸಭೆ ನಡೆಸುತ್ತೇವೆ, ಇದು ಸಿಎಂ ವಿರುದ್ದ ಅಲ್ಲ. ಬದಲಾಗಿ ಈಗಾಗಿರುವ ಅವ್ಯವಸ್ಥೆ, ಲೋಪಗಳನ್ನು ಸರಿಪಡಿಸಲು ಸಭೆ ನಡೆಸುತ್ತೇವೆ. ಅಸಮಾಧಾನ ಇರುವ ಶಾಸಕರ ಸಭೆ ಬೆಂಗಳೂರಿನಲ್ಲಿ ನಡಿಯುತ್ತೆದೆ. ಅವ್ಯವಸ್ಥೆ ಸರಿಪಡಿಸಲು ಒತ್ತಾಯ ಮಾಡುತ್ತೇನೆ. ಪ್ರಾದೇಶಿಕವಾಗಿ ಸರಿ ಮಾಡಬೇಕು ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಒಬ್ಬರನ್ನು ವೈಭವೀಕರಿಸುತ್ತಿದ್ದಾರೆ. ಸರ್ಕಾರ ಬರಲು ನಯಾಪೈಸೆಯನ್ನು ಖರ್ಚು ಮಾಡಿಲ್ಲ. ಇದೆಲ್ಲ ಶುದ್ದ ಸುಳ್ಳು. ಎಂಟಿಬಿ ನಾಗರಾಜ್ ಯಾವುದೇ ಸಾಲ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಯಾವ ಆಧಾರದಲ್ಲಿ ಯೋಗೇಶ್ವರ್ ಪರವಾಗಿ ಮಾತಾಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದವರು ಅದನ್ನ ಸಾಬೀತು ಮಾಡಲಿ. ಸಚಿವ ಯೋಗೇಶ್ವರ್ ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜೊತೆ ಒಳ ಒಪ್ಪಂದ ಮಾಡಿಕೊಂಡವರು. ಈಗ ಪಕ್ಷ ನನ್ನಿಂದಲೇ ಬಂತು ಅಂತ ಬೀಗುತ್ತಿದ್ದಾರೆ ಎಂದು ಸಿಪಿ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದರು.

Leave a Reply