ಮೋದಿ ತಮ್ಮ ಮಾತಿನಿಂದಾಗೋ ಪರಿಣಾಮವನ್ನ ಅರಿಯಬೇಕು: ಮನಮೋಹನ್ ಸಿಂಗ್

– ಚೀನಾ, ಭಾರತ ಸಂಘರ್ಷದ ಬಗ್ಗೆ ಪ್ರಧಾನಿಗೆ ಪತ್ರ

ನವದೆಹಲಿ: ತಮ್ಮ ಮಾತಿನಿಂದಾಗುವ ಪರಿಣಾಮವನ್ನ ಪ್ರಧಾನಿ ನರೇಂದ್ರ ಮೋದಿ ಅರಿಯಬೇಕು ಎಂದು ಮಾಜಿ ಪ್ರಧಾನಿ, ಕಾಂಗ್ರೆಸ್ ಹಿರಿಯ ಮುಖಂಡ ಮನಮೋಹನ್ ಸಿಂಗ್ ಹೇಳಿದ್ದಾರೆ.

ಸರ್ವಪಕ್ಷ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, “ದೇಶದ ಗಡಿಯನ್ನು ರಕ್ಷಿಸಲು ನಮ್ಮ ಸೇನಾ ಪಡೆಗಳು ಸಂಪೂರ್ಣ ಸಮರ್ಥವಾಗಿವೆ. ದೇಶದೊಳಗೆ ಯಾರೂ ಪ್ರವೇಶ ಮಾಡಿಲ್ಲ. ಯಾವುದೇ ಅಧಿಕಾರಿಯನ್ನು ಚೀನಾ ಸೆರೆ ಹಿಡಿದಿಲ್ಲ” ಎಂದು ಹೇಳಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮನಮೋಹನ್ ಸಿಂಗ್ ಅವರು, “ಲಡಾಕ್‍ನಲ್ಲಿ ಮೃತಪಟ್ಟ ಸೈನಿಕರಿಗೆ ಪ್ರಧಾನಿ ನ್ಯಾಯ ಒದಗಿಸಬೇಕು. ಜನರ ನಂಬಿಕೆಯನ್ನು ಹಾಳು ಮಾಡುವುದು ಐತಿಹಾಸಿಕ ದ್ರೋಹವಾಗಿದೆ” ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಈ ಮೂಲಕ ಹುತಾತ್ಮರಾದ ಯೋಧರ ತ್ಯಾಗವನ್ನು ವ್ಯರ್ಥ ಮಾಡದಂತೆ ಮನವಿ ಸಲ್ಲಿಸಿದ್ದಾರೆ.

ಪತ್ರದಲ್ಲಿ ಏನಿದೆ?:
ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಜೂನ್ 15ರಿಂದ 16ರವರೆಗೆ 20 ಮಂದಿ ಯೋಧರನು ಕಳೆದುಕೊಂಡಿದ್ದೇವೆ. ಅವರು ದೇಶಕ್ಕಾಗಿ ತ್ಯಾಗ, ಶೌರ್ಯ ಮತ್ತು ಕರ್ತವ್ಯದ ಮೂಲಕ ಶ್ರಮಿಸಿ ಅಂತಿಮವಾಗಿ ಪ್ರಾಣವನ್ನು ಅರ್ಪಿಸಿದರು. ನಮ್ಮ ಕೆಚ್ಚೆದೆಯ ಸೈನಿಕರು ಮಾತೃಭೂಮಿಗಾಗಿ ಕೊನೆಯ ಉಸಿರಿನವರೆಗೂ ಹೋರಾಡಿದರು. ಅದಕ್ಕಾಗಿ ನಾವು ಅವರ ಕುಟುಂಬಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ, ಬೆಂಬಲಕ್ಕೆ ನಿಲ್ಲಬೇಕಿದೆ. ಅವರ ತ್ಯಾಗವನ್ನು ವ್ಯರ್ಥ ಮಾಡಲು ನಾವು ಬಿಡಬಾರದು.

ಈ ಕ್ಷಣದಲ್ಲಿ ನಾವು ಐತಿಹಾಸಿಕ ಸಂದರ್ಭದಲ್ಲಿ ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಾರ್ಯಗಳು ಯುವ ಪೀಳಿಗೆ ನಮ್ಮನ್ನು ಹೇಗೆ ಗ್ರಹಿಸುತ್ತವೆ ಎಂಬುದರ ಬಗ್ಗೆ ಗಂಭೀರವಾದ ಪ್ರಭಾವ ಬೀರುತ್ತವೆ. ಪ್ರಧಾನಿ ನಮ್ಮನ್ನು ಮುನ್ನಡೆಸುವವರು ಕರ್ತವ್ಯವನ್ನು ಹೊಂದಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿಗೆ ಪ್ರಜಾಪ್ರಭುತ್ವದಲ್ಲಿ ಅಂತಹ ವಿಶೇಷ ಜವಾಬ್ದಾರಿ ಇರುತ್ತದೆ. ರಾಷ್ಟ್ರದ ಭದ್ರತೆಯ ಕಾರ್ಯತಂತ್ರ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಮೇಲೆ ಪ್ರಧಾನಿ ಹಾಗೂ ಅವರ ಕಚೇರಿಯಿಂದ ಬರುವ ಹೇಳಿಕೆಗಳ ಪರಿಣಾಮವನ್ನು ಯಾವಾಗಲೂ ಗಮನದಲ್ಲಿರಿಸಿಕೊಳ್ಳಬೇಕು.

2020ರ ಏಪ್ರಿಲ್‍ನಿಂದ ಇಲ್ಲಿಯವರೆಗೆ ಅನೇಕ ಬಾರಿ ದಾಳಿ ಮಾಡುವ ಮೂಲಕ ಚೀನಾ ನಿರ್ಭಯವಾಗಿ ಮತ್ತು ಕಾನೂನುಬಾಹಿರವಾಗಿ ಭಾರತದ ಭೂಪ್ರದೇಶಗಳಾದ ಗಾಲ್ವಾನ್ ಕಣಿವೆ ಮತ್ತು ಪಾಂಗೊಂಗ್ ತ್ಸೋ ಸರೋವರವನ್ನು ಅತಿಕ್ರಮಣ ಮಾಡುತ್ತಿದೆ. ಚೀನಾ ಬೆದರಿಕೆಗಳಿ ನಾವು ಹೆದರುವ ಅಗತ್ಯವೇ ಇಲ್ಲ. ದೇಶದ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಅನುಮತಿಸುವುದಿಲ್ಲ.

ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ತಪ್ಪು ಮಾಹಿತಿಯು ಪರ್ಯಾಯವಲ್ಲ ಎಂದು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಸುಳ್ಳು ಹೇಳಿಕೆಗಳ ಮೂಲಕ ಸತ್ಯವನ್ನು ನಿಗ್ರಹಿಸುವುದು ಸರಿಯಲ್ಲ. ಹುತಾತ್ಮ ಕರ್ನಲ್ ಬಿ. ಸಂತೋಷ್ ಬಾಬು ಮತ್ತು ಸೈನಿಕರ ತ್ಯಾಗವನ್ನು ಅರಿತು ದೇಶದ ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ಸಮರ್ಥಿಸಿಕೊಂಡ ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿ ಕೇಂದ್ರ ಸರ್ಕಾರ ಶ್ರಮಿಸಬೇಕು ಎಂದು ಒತ್ತಾಯಿಸುತ್ತೇವೆ. ದೇಶದ ಜನರ ನಂಬಿಕೆಯನ್ನು ಕಡೆಗಣಿಸುವುದು ಐತಿಹಾಸಿಕ ದ್ರೋಹವಾಗಿದೆ.

Comments

Leave a Reply

Your email address will not be published. Required fields are marked *