ಮೋದಿ ಜಾಗದಲ್ಲಿ ಇನ್ಯಾರೋ ಇರ್ತಿದ್ದರೆ ಪರಿಸ್ಥಿತಿ ಗಂಭೀರವಾಗ್ತಿತ್ತು: ಸಿ.ಟಿ ರವಿ

ಚಿಕ್ಕಮಗಳೂರು: ಸಿದ್ದರಾಮಯ್ಯನವರೇ ನೀವು, ರಾಜ್ಯಪಾಲರು ಸಭೆ ಕರೆದರೆ ಅವರಿಗೆ ಸಂವಿಧಾನಿಕ ಅಧಿಕಾರ ಇಲ್ಲ ಹೇಗೆ ಕರೆದರು, ಏಕೆ ಕರೆದರು ಎನ್ನುತ್ತೀರಾ..? ಪ್ರಧಾನ ಮಂತ್ರಿ ಸಭೆ ಕರೆದರೆ ಅವರೇನು ಹೆಡ್‍ಮಾಸ್ಟ್ರಾ ಅಂತೀರಾ..? ಸಿದ್ದರಾಮಯ್ಯನವರೇ, ಏನಾಗಿದೆ ನಿಮ್ಮ ತಲೆಗೆ, ಇದು ರಾಜಕಾರಣ ಮಾಡುವ ಸಮಯವಾ ಎಂದು ಮಾಜಿ ಸಿಎಂ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಪಿಪಿಇ ಕಿಟ್ ಧರಿಸಿ ಕೊರೊನಾ ರೋಗಿಗಳ ಯೋಗ-ಕ್ಷೇಮ ವಿಚಾರಿಸಿ ಮಾತನಾಡಿದ ಅವರು, ಇದು ಕರ್ತವ್ಯ ನಿರ್ವಹಿಸೋ ಸಮಯ, ಅಧಿಕಾರ ನಿರ್ವಹಿಸೋ ಸಂದರ್ಭವಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಇರೋ ಜಾಗದಲ್ಲಿ ಇನ್ಯಾರನ್ನೋ ಕಲ್ಪನೆ ಮಾಡಿಕೊಂಡಿದ್ದರೆ ಇಂದು ಇದಕ್ಕಿಂತ ಗಂಭೀರವಾದ ಪರಿಸ್ಥಿತಿ ಆಗುತ್ತಿತ್ತು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಇದು ರಾಜಕಾರಣ ಮಾಡುವ ಸಂದರ್ಭವಲ್ಲ. ಒಟ್ಟಾರೆಯಾಗಿ ಎದುರಿಸಬೇಕಾದ ಸ್ಥಿತಿ. ಇವತ್ತು ಶೇ.99 ರಷ್ಟು ರಿಕವರಿ ಇದೆ. ಸರ್ಕಾರ ಕೈಕಟ್ಟಿ ಕೂತಿದ್ದರೆ 99 ಪರ್ಸೆಂಟ್ ರಿಕವರಿ ಆಗ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರ ತನ್ನ ಪ್ರಯತ್ನ ಎಲ್ಲಾ ಮಾಡಿದೆ, ಮಾಡುತ್ತಿದೆ. ಇದನ್ನ ಯಶಸ್ವಿಯಾಗಿ ಎದುರಿಸುವ ವಿಶ್ವಾಸವಿದೆ. ಇಡೀ ವ್ಯವಸ್ಥೆಯೇ ಕೊಲ್ಯಾಪ್ಸ್ ಆಗಿದ್ದರೆ ಪ್ಲೇಗ್, ಕಾಲರ ಬಂದಾಗ ಊರೂರು ತೊರೆದು ಹೆಣ ಹೆತ್ತಲು ಜನ ಇಲ್ಲದ ಪರಿಸ್ಥಿತಿ ಇತ್ತಲ್ಲ. ಆ ರೀತಿ ಪರಿಸ್ಥಿತಿ ಬರುತ್ತಿತ್ತು ಎಂದಿದ್ದಾರೆ.

ಭಾರತ ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಕೂಡಲೇ 15 ಪಟ್ಟು ಕೊರೊನಾ ಕೇಸ್ ಜಾಸ್ತಿ ಆಯ್ತು. ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ 2 ಅಥವಾ 3 ಪಟ್ಟು ಹೆಚ್ಚಾಗಬಹುದು, ಅದನ್ನ ಎದುರಿಸುವ ಸ್ಥಿತಿಯಲ್ಲಿದ್ದೇವೆ ಎಂದು ಭಾವಿಸಿದ್ದರು. 15 ಪಟ್ಟು ಜಾಸ್ತಿ ಆಗುತ್ತೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಕೊರೊನಾ ವಿರುದ್ಧ ಹೋರಾಟದಲ್ಲಿ ಸಹಕಾರಿಗಳಾಗಿ. ನೀವು ಕೊರೊನಾ ವಿರುದ್ಧ ಹೋರಾಟ ಮಾಡ್ತಿರೋರ ವಿರುದ್ಧ ಹೋರಾಟ ಮಾಡೋ ಸಣ್ಣತನ ತೋರಬೇಡಿ ಎಂದು ವಿರೋಧ ಪಕ್ಷದವರಿಗೆ ಮನವಿ ಮಾಡಿದ್ದಾರೆ.

ನಾವ್ಯಾರು ನಮ್ಮ ಮನೆಗೆ ಜನ ಬರಬೇಡಿ ಎಂದು ಬೀಗ ಹಾಕಿಕೊಂಡು ಕೂತಿಲ್ಲ. ಜನ ಬರಬೇಡಿ ಎಂದು ಬಾಗಿಲು ಹಾಕಿಕೊಂಡು ಕೂತವರು ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ನಾವು ಎಷ್ಟು ಆಗುತ್ತೋ ಅಷ್ಟು ಜನಗಳ ಮಧ್ಯೆ ಇದ್ದು ಸಹಕಾರ ಕೊಡುತ್ತಿದ್ದೇವೆ. ಕೊರೊನಾ ಇದೆ. ನಮ್ಮ ಮನೆಗೆ ಬರಬೇಡಿ. ಕಷ್ಟ ಹೇಳಿಕೊಳ್ಳಬೇಡಿ ಎಂದು ಗೇಟಿಗೆ ಬೀಗ ಹಾಕಿಕೊಂಡು ಕೂತಿಲ್ಲ. ಜನರ ಮಧ್ಯವೇ ಇದ್ದು ಏನು ಕೆಲಸ ಮಾಡಬೇಕೋ ಆ ಕೆಲಸ ಮಾಡುತ್ತಿದ್ದೇವೆ ಎಂದು ಗರಂ ಆದರು.

Comments

Leave a Reply

Your email address will not be published. Required fields are marked *