ಮೊಳೆ ಹಾಕಿದ ಹೆದ್ದಾರಿಯಲ್ಲಿ ಹೂವಿನ ಗಿಡ ನೆಟ್ಟ ರೈತರು

ನವದೆಹಲಿ: ಪ್ರತಿಭಟನಾ ನಿರತ ರೈತರು ದೆಹಲಿ ಪ್ರವೇಶಿಸದಿರಲು ಸರ್ಕಾರ ಏಳು ಸುತ್ತಿನ ಮುಳ್ಳು ತಂತಿ, ಮೊಳೆಯ ಕೋಟೆಯನ್ನ ನಿರ್ಮಿಸಿಕೊಂಡಿತ್ತು. ಇದೀಗ ಮೊಳೆ ಹಾಕಿದ ಜಾಗದಲ್ಲಿ ಹೂವಿನ ಗಿಡಗಳನ್ನ ನೆಡುವ ಮೂಲಕ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. ರೈತರು ಮೊಳೆ ಹಾಕಿರುವ ಜಾಗದಲ್ಲಿ ಹೂವಿನ ಸಸಿ ಪ್ಲಾಂಟ್ ಮಾಡುತ್ತಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಘಾಜಿಪುರ ಗಡಿಯಲ್ಲಿ ಮೊಳೆಗಳನ್ನ ಹಾಕಿದ್ದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಗುರುವಾರ ಹೆದ್ದಾರಿಯಲ್ಲಿ ಮೊಳೆ ತೆಗೆಯುತ್ತಿರುವ ಕೆಲ ವಿಡಿಯೋಗಳು ವೈರಲ್ ಆಗಿದ್ದವು. ವೀಡಿಯೋಗೆ ಸ್ಪಷ್ಟನೆ ನೀಡಿದ ಪೊಲೀಸರು, ರಸ್ತೆಯ ಮೇಲ್ಭಾಗದಲ್ಲಿ ಮೊಳೆ ಇರೋ ಕಾರಣ ಕಾಲಿನಿಂದಲೇ ಕಿತ್ತ ಬಹುದಾಗಿತ್ತು. ಹಾಗಾಗಿ ತಗ್ಗು ಮಾಡಿ ಮತ್ತಷ್ಟು ಆಳವಾಗಿ ಮೊಳೆ ಹಾಕಲಾಗ್ತಿದೆ ಎಂದು ಹೇಳಿದ್ದರು.

ದೆಹಲಿಯ ಗಡಿಗಳತ್ತ ದೊಡ್ಡ ಮಟ್ಟದಲ್ಲಿ ರೈತರು ಬಂದು ಸೇರುವುದು ಹೆಚ್ಚಾಗುತ್ತಲೇ ಇದೆ. ಇದರಿಂದ ಉತ್ತೇಜಿತರಾದಂತಿರುವ ರೈತ ಮುಖಂಡರು, ಮತ್ತೊಮ್ಮೆ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ದೆಹಲಿ ಪರೇಡ್ ಬಳಿಕ ಇದೀಗ ‘ಚಕ್ಕಾ ಜಾಮ್’ಗೆ ಕರೆ ನೀಡಿದ್ದಾರೆ. ಇಂದು ದೆಹಲಿ ಹೊರತುಪಡಿಸಿ ಇಡೀ ದೇಶಾದ್ಯಂತ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದರಿ ಬಂದ್‍ಗೆ ಕರೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಹೈವೇ ಬಂದ್ ನಡೆಸಲು ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *