ಮೊಬೈಲ್ ರಿಪೇರಿ ಮಾಡದ್ದಕ್ಕೆ ಸರ್ವಿಸ್ ಸೆಂಟರ್ ಮುಂದೆ ಬೆಂಕಿ ಹಚ್ಚಿಕೊಂಡ

– ಇದ್ದಕ್ಕಿದ್ದಂತೆ ಬಂದ್ ಆಗಿದ್ದ ಹೊಸ ಮೊಬೈಲ್

ನವದೆಹಲಿ: ಮೊಬೈಲ್ ಬದಲಿಸಿ ಕೊಡಲಿಲ್ಲವೆಂದು ಹತಾಶನಾದ ವ್ಯಕ್ತಿ ಸರ್ವಿಸ್ ಸೆಂಟರ್ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ನವದೆಹಲಿಯ ಪ್ರಹ್ಲಾದ್‍ಪುರ ನಿವಾಸಿ ಭೀಮ್ ಸಿಂಗ್ ಬೆಂಕಿ ಹಚ್ಚಿಕೊಂಡ ವ್ಯಕ್ತಿ. ಸಿಂಗ್ ಅವರನ್ನು ಇದೀಗ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಸೋದರ ಸೊಸೆಯ ಆನ್‍ಲೈನ್ ತರಗತಿಗಾಗಿ ಸಿಂಗ್ ಇತ್ತೀಚೆಗೆ ಮೊಬೈಲ್ ಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಮೊಬೈಲ್ ಬಂದ್ ಆಗಿದೆ. ತಕ್ಷಣವೇ ಸರ್ವಿಸ್ ಸೆಂಟರ್‍ಗೆ ಕೊಂಡೊಯ್ದಿದ್ದಾರೆ. ಸಿಂಗ್ ಇನ್ವರ್ಟರ್ ಗಳಿಗೆ ಬ್ಯಾಟರಿ ರಿಪೇರಿ ಮಾಡು ಕೆಲಸ ಮಾಡುತ್ತಾರೆ.

ಘಟನೆ ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ವ್ಯಕ್ತಿ ಮೊಬೈಲ್ ಸರ್ವಿಸ್ ಸೆಂಟರ್‍ನಿಂದ ಹೊರಗೆ ಬರುತ್ತಿದ್ದಂತೆ ಪೆಟ್ರೋಲ್ ಸುರಿದುಕೊಂಡು ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವುದು ಸೆರೆಯಾಗಿದೆ. ಸಿಂಗ್ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಸ್ಥಳೀಯರು ರಕ್ಷಿಸಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೋಹಿಣಿ ಡಿಸಿಪಿ ಪ್ರಮೋದ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಘಟನೆ ಕುರಿತು ಸಿಂಗ್ ವಿವರಿಸಿದ್ದು, ನಾನು ಮನೆಯ ಬಳಿ ಇರುವ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದೆ. ಆದರೆ ಮೊಬೈಲ್ ಇದ್ದಕ್ಕಿದ್ದಂತೆ ಬಂದ್ ಆಯಿತು. ಬಳಿಕ ಸರ್ವಿಸ್ ಸೆಂಟರ್ ಗೆ ತೆರಳಿ ಮೊಬೈಲ್ ರೀಪ್ಲೇಸ್ ಮಾಡಿಕೊಡುವಂತೆ ಕೇಳಿದೆ. ಆದರೆ ಸರ್ವಿಸ್ ಸೆಂಟರ್ ಸಿಬ್ಬಂದಿ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಬೆಂಕಿ ಹಚ್ಚಿಕೊಂಡೆ ಎಂದು ತಿಳಿಸಿದ್ದಾರೆ.

ಸಿಂಗ್ ಶುಕ್ರವಾರ ಸರ್ವಿಸ್ ಸೆಂಟರ್ ಗೆ ತರಳಿ ಮೊಬೈಲ್ ರೀಪ್ಲೇಸ್ ಮಾಡುವಂತೆ ಕೇಳಿಕೊಂಡಿದ್ದು, ಹಲವು ಬಾರಿ ಸರ್ವಿಸ್ ಸೆಂಟರ್ ಸಿಬ್ಬಂದಿ ಬಳಿ ಗೋಗರೆದಿದ್ದಾರೆ. ಆದರೆ ಸಿಬ್ಬಂದಿ ಇದಕ್ಕೆ ಒಪ್ಪಿಕೊಂಡಿಲ್ಲ. ಹೀಗಾಗಿ ಬೆಂಕಿ ಹಚ್ಚಿಕೊಂಡಿದ್ದಾನೆ. ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಮೊಬೈಲ್ ಪದೇ ಪದೆ ತುಂಬಾ ಬಿಸಿ ಆಗುತ್ತಿತ್ತು. ಬಳಿಕ ಕೆಳಗೆ ಬೀಳುತ್ತಿದ್ದಂತೆ ಸಿಡಿಯಿತು ಎಂದು ಸಿಂಗ್ ಪತ್ನಿ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *