ಮೊಬೈಲ್, ಪರ್ಸ್ ಕದ್ದು ಪರಾರಿ- ಎಟಿಎಂ ಪಿನ್ ಕೇಳಲು ಬಂದು ಸಿಕ್ಕಿಬಿದ್ರು

– ಸ್ವಲ್ಪ ದೂರ ತೆರಳಿ ಎಟಿಎಂ ಪಿನ್‍ಗಾಗಿ ಮರಳಿದ್ದ ಕಳ್ಳರು

ನವದೆಹಲಿ: ಮೊಬೈಲ್, ಪರ್ಸ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರ ಮೇಲೆ ಗುಂಡಿನ ದಾಳಿ ನಡೆಸಿ ಪೊಲೀಸರು ಬಂಧಿಸಿದ್ದಾರೆ. ಆದರೆ ಇವರು ಹೇಗೆ ಸಿಕ್ಕಿಬಿದ್ದರು ಎಂದು ಕೇಳಿದರೆ ನಿಮಗೂ ಸೋಜಿಗವೆನಿಸುತ್ತದೆ.

ನೊಯ್ಡಾದ ಫೇಸ್-3 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಗೌರವ್ ಸಿಂಗ್ ಹಾಗೂ ಸದಾನಂದ ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಥಳೀಯರು, 25 ವರ್ಷ ವಯಸ್ಸಿನವರು. ಆರೋಪಿಗಳಿಂದ ಪರ್ಸ್, 3,200 ರೂ. ನಗದು, ಎಟಿಎಂ ಕಾರ್ಡ್ ಹಾಗೂ 2 ದೇಶಿ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೆಂಟ್ರಲ್ ನೊಯ್ಡಾ ಡಿಸಿಪಿ ಹರೀಶ್ ಚಂದ್ರ ಮಾಹಿತಿ ನೀಡಿದ್ದಾರೆ.

ವ್ಯಕ್ತಿಯೊಬ್ಬ ರಾತ್ರಿ ಊಟಕ್ಕೆ ಹೊರಗಡೆ ಬಂದಾಗ ಬೈಕ್‍ನಲ್ಲಿ ಬಂದ ಇಬ್ಬರು ಆರೋಪಿಗಳು ಆತನಿಗೆ ಪಿಸ್ತೂಲು ತೋರಿಸಿ ಮೊಬೈಲ್ ಹಾಗೂ ಪರ್ಸ್ ಕದ್ದು ಪರಾರಿಯಾಗುತ್ತಿದ್ದರು. ಸಂತ್ರಸ್ತನ ಪರ್ಸ್‍ನಲ್ಲಿ ಸ್ವಲ್ಪ ನಗದು, ವಾಹನ ಚಾಲನಾ ಪರವಾನಗಿ, ಆಧಾರ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಇತ್ತು. ಇವನ್ನೆಲ್ಲ ಕದ್ದು ಸ್ವಲ್ಪ ದೂರ ತೆರಳಿದ ನಂತರ ಆರೋಪಿಗಳು ಎಟಿಎಂ ಪಿನ್ ಕೇಳಲು ಮರಳಿ ಸಂತ್ರಸ್ತನ ಬಳಿ ಬಂದಿದ್ದರು. ನಂತರ ಮತ್ತೆ ಓಡಿದ್ದರು ಎಂದು ಡಿಸಿಪಿ ವಿವರಿಸಿದ್ದಾರೆ.

ಈ ಕುರಿತು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ನೀಡಲಾಯಿತು. ನಂತರ ಅನುಮಾನ ಬಂದವರನ್ನು ಪರಿಶೀಲಿಸುವಂತೆ ತಳಿಸಲಾಯಿತು. ಪೊಲೀಸರು ಭದ್ರತಾ ತಪಾಸಣೆ ನಡೆಸಿ ಇಬ್ಬರು ಆರೋಪಿಗಳನ್ನು ತಡೆ ಹಿಡಿದಿದ್ದರು. ತಪಾಸಣೆ ನಿಲ್ಲಿಸಿ ಎಂದು ಹೇಳಿ ಪೊಲೀಸರ ಮೇಲೇ ಆರೋಪಿಗಳು ಗುಂಡು ಹಾರಿಸಿ, ಮತ್ತೆ ತಪ್ಪಿಸಿಕೊಂಡರು. ಪೊಲೀಸರು ಬಿಡದೆ ಹಿಂಬಾಲಿಸಿದರು. ಆಗ ಪ್ರತಿಯಾಗಿ ಪೊಲೀಸರು ಸಹ ಗುಂಡು ಹಾರಿಸಿದರು ಇಬ್ಬರಿಗೂ ಗಾಯಗಳಾಗಿದ್ದು, ಬಂಧಿಸಿ ಹತ್ತಿರದ ಆಸ್ಪತ್ರೆಗೆ ದಶಖಲಿಸಲಾಯಿತು ಎಂದು ಡಿಸಿಪಿ ಚಂದ್ರ ವಿವರಿಸಿದ್ದಾರೆ.

Comments

Leave a Reply

Your email address will not be published. Required fields are marked *