ಮೈಸೂರು ಮೇಯರ್ ಚುನಾವಣೆಯಲ್ಲಿ ಸೋಲು – ಪಾಲಿಕೆ ಸದಸ್ಯ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ರಾಜೀನಾಮೆ

ಮೈಸೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿಯಿಂದಾಗಿ ನಿನ್ನೆ ನಡೆದ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ ಮಹಾನಗರ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಸುನಂದ ಪಾಲನೇತ್ರ ಈ ಬಾರಿ ಪಾಲಿಕೆಯ ಪ್ರಬಲ ಮೇಯರ್ ಆಕಾಂಕ್ಷಿಯಾಗಿದ್ದರು. ಸುನಂದ ಪಾಲನೇತ್ರರನ್ನು ಮೇಯರ್ ಮಾಡಲು ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಅಖಾಡಕ್ಕಿಳಿದಿದ್ದರು. ಆದರೆ ಕೊನೆಕ್ಷಣದಲ್ಲಿ ನಡೆದ ರಾಜಕೀಯ ಹೈಡ್ರಾಮಾದಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸುನಂದ ಅವರಿಗೆ ಮೇಯರ್ ಸ್ಥಾನ ಕೈತಪ್ಪುವಂವತಾಗಿತ್ತು. ಹಾಗಾಗಿ ಸುನಂದ ಕ್ಷೇತ್ರದಲ್ಲಿನ ರಾಜಕಾರಣಕ್ಕೆ ಮನನೊಂದು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಪತ್ರ ಬರೆಯುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸೋತ ನನಗೆ ಬೇಸರ ಉಂಟಾಗಿದೆ. ಚುನಾವಣೆಯಲ್ಲಿ ಸೋತ ನಂತರವು ನನಗೆ ಪಾಲಿಕೆ ಸದಸ್ಯೆಯಾಗಿ ಕರ್ತವ್ಯ ನಿರ್ವಹಿಸಲು ಮಾನಸಿಕ ಹಿಂಸೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನನಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಸುನಂದ ಪಾಲನೇತ್ರ ಸಿಎಂಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ವಾರ್ಡ್ ನಂ 59ರಿಂದ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸುನಂದ ಪಾಲನೇತ್ರ ಈ ಬಾರಿಯ ಮೇಯರ್ ಎಂದೇ ಬಿಂಬಿತವಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡರಿಗೆ ಬೆಂಬಲ ಸೂಚಿಸಿ ಮೇಯರ್ ಪಟ್ಟಕ್ಕೇರಿಸಿ, ಉಪಮೇಯರ್ ಆಗಿ ಕಾಂಗ್ರೆಸ್‍ನ ಅನ್ವರ್ ಬೇಗ್ ಅವರನ್ನು ಆಯ್ಕೆ ಮಾಡಿತ್ತು. ಇದರಿಂದ ನೊಂದ ಸುನಂದ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *