ಮೈಸೂರಿಗೆ ಬಂದು ಪಕ್ಷದಿಂದ ಹೊರಹಾಕೋದಾಗಿ ಹೆಚ್‍ಡಿಕೆ ಹೇಳಿದ್ದಾರೆ: ಜಿ.ಟಿ ದೇವೇಗೌಡ

– ಸಾರಾ ಮಹೇಶ್ ವಿರುದ್ಧ ಶಾಸಕ ಅಸಮಾಧಾನ

ಮೈಸೂರು: ಜೆಡಿಎಸ್ ಸಂಘಟಕರ ಪಟ್ಟಿಯಿಂದ ಶಾಸಕ ಜಿ.ಟಿ ದೇವೇಗೌಡರಿಗೆ ಕೋಕ್ ನೀಡಲಾಗಿದ್ದು, ಈ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿಗೆ ಬಂದು ಪಕ್ಷದಿಂದ ಹೊರಗೆ ಹಾಕುತ್ತೇನೆ ಅಂತ ಖುದ್ದು ಕುಮಾರಸ್ವಾಮಿ ಹೇಳಿದ್ದಾರೆ. ಅಂದರೆ ಎಲ್ಲವೂ ಮುಗಿಯಿತು ಅಂತ ಅರ್ಥ ಅಲ್ವೆ? ಪಟ್ಟಿಯ ಬಗ್ಗೆ ಹೇಳುವುದಕ್ಕೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನದು ಏನೂ ನಡೆಯಲಿಲ್ಲ. ಈಗ ಕೇವಲ ಶಾಸಕ. ನನ್ನ ಮಾತು ಯಾರು ಕೇಳುತ್ತಾರೆ. ಕುಮಾರಸ್ವಾಮಿ ಮೈಸೂರು ಹೈಕಮಾಂಡ್ ಹೇಳಿದಂತೆ ಎಲ್ಲವನ್ನೂ ಮಾಡಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸಾರಾ ಮಹೇಶ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಮೈಸೂರಿಗೆ ಬರಲಿ. ಬಂದು ನನ್ನನ್ನು ಹೊರಗೆ ಹಾಕಲಿ. ಆ ಮೇಲೆ ಏನು ಮಾಡಬೇಕು ಅಂತ ನೋಡಿದರೆ ಆಯ್ತು ಎಂದರು.

ಸಾ.ರಾ.ಮಹೇಶ್ ಜಲದರ್ಶಿನಿ ಅತಿಥಿ ಗೃಹದಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಜಿ.ಟಿ ದೇವೇಗೌಡರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಅಂತ ಹೇಳಿದ್ದರು. ಆದರೆ ಮೇಯರ್ ಚುನಾವಣೆ ಸಂಬಂಧ ಸಭೆ ನಡೆಸಿದಾಗ ನನ್ನನ್ನು ಒಂದು ಮಾತು ಕರೆಯಲಿಲ್ಲ. ಅವರವರೇ ಸಭೆ ಮಾಡಿಕೊಂಡರು. ಆ ರೀತಿ ಹೇಳ್ತಾರೆ, ಈ ರೀತಿ ಮಾಡ್ತಾರೆ. ನನ್ನನ್ನು ಜೆಡಿಎಸ್ ನಿಂದ ದೂರ ಮಾಡಬೇಕು ಎಂಬ ಪಿತೂರಿ ಮೊದಲಿಂದ ನಡೆಯುತ್ತಿದೆ ಎಂದರು.

ಈಗ ರಾಜಕಾರಣ ಕಷ್ಟ. ನನಗೂ 75 ವರ್ಷ ವಯಸ್ಸಾಯ್ತು. ಇನ್ನೆರಡು ವರ್ಷ ಶಾಸಕನಾಗಿ ಇರುತ್ತೇನೆ. ಆ ಮೇಲೆ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಅಂತ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *