ಮೇಕೆದಾಟು ಯೋಜನೆಯ ತ್ವರಿತಗತಿಗೆ ಆಗ್ರಹಿಸಿ ಎಎಪಿಯಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು: ಮೇಕೆದಾಟು ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಎಎಪಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಪಿಯ ರಾಜಕೀಯ ಚಟುವಟಿಕೆ ವಿಭಾಗದ ಮುಖ್ಯಸ್ಥರಾದ ಫಣಿರಾಜ್ ಎಸ್.ವಿ ಅವರು, ಬೆಂಗಳೂರಿನಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಭವಿಷ್ಯದಲ್ಲಿ ಭಾರೀ ತೊಂದರೆ ಎದುರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಮೇಕೆದಾಟು ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯವನ್ನಾಳಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಕುಂಟುನೆಪ ಹೇಳಿ ಯೋಜನೆಯನ್ನು ಮುಂದೂಡುವ ಮೂಲಕ ಜನರನ್ನು ವಂಚಿಸಿದವು. ಈಗ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಸಿಕ್ಕಿದ್ದರೂ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಕ್ಷುಲ್ಲಕ ರಾಜಕೀಯ ಹಾಗೂ ಆಡಳಿತ ಪಕ್ಷದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಮೇಕೆದಾಟು ಎಂಬ ಅತ್ಯುತ್ತಮ ಯೋಜನೆ ನೆನೆಗುದಿಗೆ ಬಿದ್ದಿರುವುದು ವಿಪರ್ಯಾಸ ಎಂದು ಫಣಿರಾಜ್ ಎಸ್ ವಿ ರವರು ಆಕ್ರೋಶ ವ್ಯಕ್ತಪಡಿಸಿದರು.

2021ರ ಆಗಸ್ಟ್ 5, ಗುರುವಾರದಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಸಮೀಪದ ಮೌರ್ಯ ಹೋಟೆಲ್ ಹತ್ತಿರವಿರುವ ಗಾಂಧಿ ಪ್ರತಿಮೆ ಎದುರು ನಮ್ಮ ಹೋರಾಟ ನಡೆಯಲಿದೆ. ಪಕ್ಷದ ಸಂಚಾಲಕರಾದ ಪೃಥ್ವಿ ರೆಡ್ಡಿಯವರ ನೇತೃತ್ವದಲ್ಲಿ ಎಎಪಿಯ ನೂರಾರು ಕಾರ್ಯಕರ್ತರು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ. 12 ತಿಂಗಳ ಡೆಡ್‍ಲೈನ್ ಇಟ್ಟುಕೊಂಡು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂಬುದು ನಮ್ಮ ಆಗ್ರಹ. ನಾಡಿನ ಒಳಿತಿಗಾಗಿ ನಡೆಯುತ್ತಿರುವ ಹೋರಾಟವನ್ನು ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು. ಇದನ್ನೂ ಓದಿ: ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ

ಮೇಕೆದಾಟುಗೆ ಅವಕಾಶ ನೀಡುವುದೇ ಇಲ್ಲವೆಂದು ತಮಿಳುನಾಡಿನ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಮೇಕೆದಾಟು ಯೋಜನೆಯ ಅಗತ್ಯವಿಲ್ಲವೆಂದು ಇದರಿಂದಲೇ ತಿಳಿಯುತ್ತದೆ. ದ್ವಂದ್ವನೀತಿಯನ್ನು ಬಿಟ್ಟು, ಮೇಕೆದಾಟು ವಿಷಯದಲ್ಲಿ ತಮ್ಮ ನಿಲುವು ಏನೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ಪಷ್ಟಪಡಿಸಬೇಕು. ಇದೊಂದು ಕೇವಲ ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ. ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಮಿಳುನಾಡಿನ ತಮ್ಮ ಪಕ್ಷದ ಮುಖಂಡರಿಗೆ ಇದನ್ನು ಮನವರಿಕೆ ಮಾಡಿಕೊಡಲಿ ಎಂದು ಪಕ್ಷದ ಮಹಿಳಾ ಘಟಕದ ನಾಯಕಿ ಉಷಾ ಮೋಹನ್ ಹೇಳಿದರು.

Comments

Leave a Reply

Your email address will not be published. Required fields are marked *