ಮೃತ ಸೋಂಕಿತನ ಬಳಿ ಇದ್ದ 29 ಸಾವಿರ ಹಣ ಕಳ್ಳತನ

ಮಡಿಕೇರಿ : ಕೋವಿಡ್ ಸೋಂಕಿನಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಮೃತಪಟ್ಟವರಿಂದ ನಗ, ನಾಣ್ಯ ದೋಚುವ ಅಮಾನವೀಯ ಘಟನೆಗಳು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಮರುಕಳುಹಿಸುತ್ತಲೇ ಇವೆ.

ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ರಜನಿ ಅವರ ಜೇಬಿನಲ್ಲಿದ್ದ 29 ಸಾವಿರ ರೂಪಾಯಿ ಹಣವನ್ನು ಆಸ್ಪತ್ರೆ ಸಿಬ್ಬಂದಿ ಕದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಗ್ರಾಮದ ರಜನಿ ಉಸಿರಾಟದ ಸಮಸ್ಯೆಯಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಮೇ 9 ರಂದು ದಾಖಲಾಗಿದ್ದರು. ಈ ವೇಳೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಡ್‍ಗಳ ಕೊರತೆ ಎದುರಾಗಿರುವುದರಿಂದ ಇಲ್ಲಿಯೂ ಆ ರೀತಿ ಏನಾದರೂ ಆಗಬಹುದೆಂಬ ಅನುಮಾನದಿಂದ ಸೋಂಕಿತ ರಜನಿಯೊಂದಿಗೆ ಅವರ ಕುಟುಂಬಸ್ಥರು 29 ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದ್ದರು.

ರಜನಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಐಸಿಯು ಬೆಡ್‍ಗೆ ಸ್ಥಳಾಂತರ ಮಾಡುವಾಗ ಅವರ ಜೇಬಿನಲ್ಲಿದ್ದ 29 ಸಾವಿರ ರೂಪಾಯಿಯನ್ನು ಆಸ್ಪತ್ರೆಯಲ್ಲಿಯೇ ಯಾರೋ ದೋಚಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ ಇದನ್ನು ಸ್ವತಃ ರಜನಿಯವರು ತಮ್ಮ ಪತ್ನಿಗೆ ಫೋನ್ ಮಾಡಿ ತಿಳಿಸಿದ್ದಾರೆ.

ಈ ಸಂಬಂಧ ಸೋಂಕಿತ ರಜನಿರವರ ಪತ್ನಿ ಶೋಭಾ ಆಸ್ಪತ್ರೆ ಡೀನ್‍ರವರಿಗೆ ದೂರು ನೀಡಿದ್ದಾರೆ. ಅಲ್ಲದೇ ರಜನಿ ಚಿಕಿತ್ಸೆ ಫಲಿಸದೇ ಮೇ 19 ರಂದು ಮೃತಪಟ್ಟಿದ್ದಾರೆ. ಆಗಲಾದರೂ ಹಣ ಹಿಂದಿರುಗಿಸಬಹುದೆಂಬ ನಂಬಿಕೆಯಿಂದ ಅವರ ಮನೆಯವರು ಸುಮ್ಮನಾಗಿದ್ದಾರೆ. ಆದರೆ ಇದುವರೆಗೂ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮೃತ ರಜನಿರವರ ಪತ್ನಿ ಶೋಭಾ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *