ಮೃತ ನಾರಾಯಣ್ ಅಚಾರ್ ಮಕ್ಕಳಿಗೆ ಪರಿಹಾರ ವಿತರಿಸಿದ ಸಚಿವ ವಿ.ಸೋಮಣ್ಣ

ಮಡಿಕೇರಿ: ತಲಕಾವೇರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ನಾರಾಯಣ ಆಚಾರ್ ಹಾಗೂ ಸೋದರ ಆನಂದತೀರ್ಥ ಅವರ ಕುಟುಂಬಸ್ಥರಿಗೆ ಸಚಿವ ವಿ.ಸೋಮಣ್ಣ ಪರಿಹಾರ ಚೆಕ್ ವಿತರಿಸಿದ್ದಾರೆ.

ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರ ಐದು ಲಕ್ಷ ಪರಿಹಾರದಲ್ಲಿ ಇಬ್ಬರು ಮಕ್ಕಳಾದ ನಮಿತಾ ಹಾಗೂ ಸುಶೀಲಾ ಅವರಿಗೆ ತಲಾ 2.5 ಲಕ್ಷ ಪರಿಹಾರ ಚೆಕ್ ವಿತರಿಸಿ ಸಾಂತ್ವನ ಹೇಳಿದ್ದಾರೆ. ಆನಂದ ತೀರ್ಥ ಅವರು ಬ್ರಹ್ಮಚಾರಿ ಆಗಿದ್ದ ಹಿನ್ನೆಲೆಯಲ್ಲಿ ತಂಗಿ ಸುಶೀಲಾ ಅವರಿಗೆ 5 ಲಕ್ಷ ಚೆಕ್ ನೀಡಲಾಗಿದೆ. ಇನ್ನು ಇಡೀ ಕುಟುಂಬವನ್ನು ಕಳೆದುಕೊಂಡು ಒಂಬಂಟಿ ಆಗಿದ್ದೇನೆ. ಮತ್ತೆ ಮನೆಗೆ ಬರಲು ಯಾರೂ ಇಲ್ಲ ಎಂದು ನಾರಾಯಣ ಆಚಾರ್ ಸಹೋದರಿ ಅಣ್ಣಂದಿರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ನನ್ನ ಅಣ್ಣ ತಮ್ಮಂದಿರು ಸ್ವಲ್ಪವೂ ನೋವಾಗದಂತೆ ನೋಡಿಕೊಂಡಿದ್ದರು.ಈಗ ನನಗೆ ತವರು ಮನೆಕಡೆಯವರಾಗಿ ಒಬ್ಬರೂ ಇಲ್ಲ. ಅತ್ತ ತವರು ಮನೆಯೂ ಇಲ್ಲ. ನನ್ನ ತಾಯಿಯ ಸಂಬಂಧಿಯಾಗಿ ಇನ್ನು ಯಾರು ಇಲ್ಲ ಎಂದು ಆನಂದತೀರ್ಥರ ತಂಗಿ ಸುಶೀಲ ಕಣ್ಣೀರು ಹಾಕಿದರು.

ಭೂಕುಸಿತವಾದ ಸ್ಥಳದಲ್ಲಿ ಇಂದು ಮತ್ತೊಂದು ಶವ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದೇ ಭೂಕುಸಿತದಲ್ಲಿ ರವಿಕಿರಣ್ ಮತ್ತು ಶ್ರೀನಿವಾಸ್ ಇಬ್ರು ನಾಪತ್ತೆಯಾಗಿದ್ದರು. ಸದ್ಯ ದೊರೆತಿರುವ ಶವ ಯಾರದ್ದೆಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ಇಬ್ಬರ ಸಂಬಂಧಿಕರು ಬಂದು ಬಳಿಕ ಶವದ ಗುರುತು ಪತ್ತೆ ಹಚ್ಚಬೇಕಾಗಿದೆ. ಇಲ್ಲದಿದ್ದರೆ ಡಿಎನ್‍ಎ ಪರೀಕ್ಷೆಗೆ ಕಳುಹಿಸ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *