ಮೂರು ದಶಕಗಳೇ ಕಳೆದ್ರೂ ಕಾವೇರಿ ತವರು ರೈತರ ಭೂಮಿಗೆ ಮಾತ್ರ ಹರಿದಿಲ್ಲ ನೀರು

ಮಡಿಕೇರಿ: ಸಾವಿರಾರು ರೈತರ ಬದುಕಿಗೆ ಬೆಳಕಾಗಲೆಂದು ಮೂರೂವರೆ ದಶಕಗಳ ಹಿಂದೆ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ್ದ ಚಿಕ್ಕ ಅಣೆಕಟ್ಟು. ಅದಕ್ಕಾಗಿ ನೂರಾರು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ರೈತರು ಕೂಡ ಭೂಮಿ ಹೋದರೆ ಹೋಗಲಿ, ನೀರು ಸಿಕ್ಕರೆ ಇರುವ ಭೂಮಿಯಲ್ಲಿ ಬಂಗಾರದಂತ ಬೆಳೆ ಬೆಳೆಯಬಹುದೆಂಬ ಮಹದಾಸೆಯನ್ನೇ ಇಟ್ಟುಕೊಂಡಿದ್ರು. ಅಣೆಕಟ್ಟೆ, ಕಾಲುವೆ ನಿರ್ಮಾಣವಾಗಿ ಮೂರು ದಶಕಗಳೇ ಕಳೆದರೂ ರೈತರ ಭೂಮಿಗೆ ಮಾತ್ರ ನೀರು ಹರಿದಿಲ್ಲ.

ಹೌದು. ಜಲಾಶಯಗಳು ಈ ನಾಡಿನ ಅಭಿವೃದ್ಧಿಯನ್ನು ಸೂಚಿಸುತ್ತವೆ. ಒಂದು ಜಲಾಶಯ ನಿರ್ಮಾಣವಾಯಿತ್ತೆಂದರೆ ಸಾವಿರಾರು ರೈತರ ಬದುಕು ಹಸನಾಗುತ್ತೆ. ಅಥಂದ್ದೇ ಉದ್ದೇಶದಿಂದಲೇ ಇಲ್ಲೂ ಸಹ ಅಣೆಕಟ್ಟೆ ನಿರ್ಮಿಸಲಾಗಿತ್ತು. ಅಷ್ಟಕ್ಕೂ ಈಗ ನಾವು ಹೇಳ್ತಿರೋದು ಕಾವೇರಿ ತವರು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯದ ಕಥೆ.

ಕೇವಲ ಒಂದು ಟಿಎಂಸಿಗಿಂತಲೂ ಕಡಿಮೆ ಸಾಮಥ್ರ್ಯದ ಈ ಜಲಾಶಯವನ್ನು 1985 ರಲ್ಲಿ ನಿರ್ಮಿಸಲಾಗಿದೆ. ಜಲಾಶಯಕ್ಕೆ ಎಡದಂಡೆ, ಬಲದಂಡೆ ಮತ್ತು ಹಳೇ ಬಲದಂಡೆ ನಾಲೆಗಳಿವೆ. ಹೊಸ ಬಲದಂಡೆ ನಾಲೆ ಒಟ್ಟು 29 ಕಿಲೋಮೀಟರ್ ಉದ್ದವಿದ್ದು, ನಾಲ್ಕು ಪಂಚಾಯ್ತಿಗಳ 15 ಹಳ್ಳಿಗಳಲ್ಲಿ ಅಂದರೆ 2500 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಇದು. ವಿಪರ್ಯಾಸವೆಂದರೆ ಇದುವರೆಗೆ ಹೊಸಬಲದಂಡೆ ನಾಲೆಯ 24 ನಾಲ್ಕು ಕಿಲೋಮೀಟರ್ ನಿಂದ 29 ನೇ ಕಿಲೋಮೀಟರ್ ವರೆಗೆ ಒಂದು ಹನಿಯೂ ನೀರು ಹರಿದಿಲ್ಲ.

ಸಂಪೂರ್ಣ ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಕಾಲುವೆ ಸಂಪೂರ್ಣ ಹಾಳಾಗಿದೆ. ಕೆಲವೆಡೆ ಇಲ್ಲಿ ಕಾಲುವೆ ಇದೆ ಎಂದು ಹೇಳುವುದಕ್ಕೆ ಕುರುಹುಗಳು ಇಲ್ಲ. ಅಷ್ಟರಮಟ್ಟಿಗೆ ಕಾಲುವೆ ಮುಚ್ಚಿ ಹೋಗಿದೆ. ಹೀಗಾಗಿ ಬಸವನಹಳ್ಳಿ, ಆನೆಕಾಡು ಸುಣ್ಣದಕೆರೆ, ಗೊಂದಿಬಸನಹಳ್ಳಿ, ಮಾದಪಟ್ಟಣ ಈ ಗ್ರಾಮಗಳ ನೂರಾರು ರೈತರು ಕೃಷಿಗೆ ನೀರು ಕೊಡದಿದ್ದಲ್ಲಿ, ನಮ್ಮ ಭೂಮಿಯನ್ನು ನಮಗೆ ವಾಪಸ್ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.

ಚಿಕ್ಲಿಹೊಳೆ ಜಲಾಶಯದ ಅಧಿಕಾರಿಗಳನ್ನು ಈ ಕುರಿತು ಕೇಳಿದ್ರೆ, 24ನೇ ಕಿಲೋಮೀಟರ್ ನಂತರದಲ್ಲಿ ಯಾವ ರೈತರು ನೀರು ಬೇಕೆಂದು ಇದುವರೆಗೆ ಕೇಳಿಲ್ಲ. ಆದ್ರೂ ನಾವು ನೀರು ಬಿಟ್ಟಾಗಲೆಲ್ಲಾ ಕಾಲುವೆಯ ನೀರಿನಿಂದ ಮನೆಗಳು ಸೀಪೇಜ್ ಆಗುತ್ತವೆ ಎಂದು ನೀರು ನಿಲ್ಲಿಸುವಂತೆ ಒತ್ತಾಯಿಸುತ್ತಾರೆ ಎಂಬ ಉತ್ತರ ನೀಡುತ್ತಾರೆ. ಹೀಗೆ ಹೇಳುವ ಅಧಿಕಾರಿಗಳೇ ಹೂಳು ತೆಗೆಯೋದಕ್ಕೆ ಹೆಕ್ಟೇರ್ ಗೆ ನಮಗೆ ಕೊಡೋದೇ 600 ರೂಪಾಯಿ. ಈ ಅನುದಾನ ಸಾಕಾಗೋದಿಲ್ಲ. ಹೀಗಾಗಿ ಪ್ರತೀ ವರ್ಷ ಎಲ್ಲೆಡೆ ಹೂಳು ತೆಗೆಯೋದಕ್ಕೆ ಅನುದಾನ ಸಾಕಾಗೋದಿಲ್ಲ ಎಂತಲೂ ಹೇಳುತ್ತಿದ್ದಾರೆ.

ಇದರ ನಡುವೆ ಕಾಲುವೆಗಳ ಹೂಳು ತೆಗೆಯುವುದಕ್ಕೆ, ಗಿಡಗಳನ್ನು ಕತ್ತರಿಸುವುದಕ್ಕೆ 2017-18 ರಲ್ಲಿ 13 ಲಕ್ಷ, 2018-19 ರಲ್ಲಿ 17 ಲಕ್ಷ ಮತ್ತು 2019-20 ರಲ್ಲಿ 28 ಲಕ್ಷ ವ್ಯಯಿಸಿದ್ದಾರೆ. ಇದೆಲ್ಲವುದಕ್ಕಿಂತ ಮುಖ್ಯವಾಗಿ 2015-16 ನೇ ಸಾಲಿನಲ್ಲಿ 29 ಕಿಲೋ ಕಾಲುವೆಯನ್ನೂ ಅಭಿವೃದ್ಧಿಗೊಳಿಸುವುದಕ್ಕೆ ಬರೋಬ್ಬರಿ 42.77 ಕೋಟಿ ಖರ್ಚು ಮಾಡಲಾಗಿದೆ. ಅದರಲ್ಲೂ 24 ನೇ ಕಿಲೋಮೀಟರ್ ನಿಂದ 28.5 ನೇ ಕಿಲೋಮೀಟರ್ ವರೆಗಿನ ಕಾಲುವೆ ಅಭಿವೃದ್ಧಿಗೆ 2 ಕೋಟಿ 67 ಲಕ್ಷ ಖರ್ಚುಮಾಡಲಾಗಿದೆ. ಆದ್ರೆ ಇಲ್ಲೆಲ್ಲೂ ಇಂದಿಗೂ ನೀರು ಹರಿಯುತ್ತಿಲ್ಲ. ಹೀಗಾಗಿಯೇ ರೈತರು ನಮ್ಮ ಭೂಮಿಯನ್ನಾದ್ರೂ ನಮಗೆ ಕೊಡಿ. ಕೃಷಿಯಲ್ಲದಿದ್ದರೆ ವಾಣಿಜ್ಯ ಚಟುವಟಿಕೆಗಳನ್ನಾದ್ರೂ ಮಾಡಿಕೊಂಡು ಬದುಕುತ್ತೇವೆ ಎಂದು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *