ಮೂರನೇ ದಿನವೂ ಸಿಡಿ ಸಂತ್ರಸ್ತೆ ವಿಚಾರಣೆ – ಪಿಜಿ, ಅಪಾರ್ಟ್‍ಮೆಂಟ್‍ಗೆ ಕರೆದೊಯ್ದು ಸ್ಥಳ ಮಹಜರು

– ಪಿಜಿಯಲ್ಲಿ ಸಂತ್ರಸ್ತೆ ಹೇಳಿದ್ದೇನು..?

ಬೆಂಗಳೂರು: ಮಾಜಿ ಮಂತ್ರಿ ಸಿಡಿ ಪ್ರಕರಣದ ತನಿಖೆ ಚುರುಕಾಗಿದೆ. ಸತತ ಮೂರನೇ ದಿನವೂ ಸಂತ್ರಸ್ತೆಯನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ವಿಚಾರಣೆಗೆ ಒಳಪಡಿಸಿದೆ. ನಿನ್ನೆ-ಮೊನ್ನೆಯೆಲ್ಲಾ ಹೇಳಿಕೆ ದಾಖಲಿಸಿದ್ದ ಎಸ್‍ಐಟಿ ಇಂದು ಸ್ಥಳ ಮಹಜರು ಮಾಡಿದೆ.

ಸಂತ್ರಸ್ತೆಯನ್ನು ಇಂದು, ಆಕೆ ವಾಸವಿದ್ದ ಆರ್ ಟಿ ನಗರದ ಪಿಜಿ ಮತ್ತು ಆಕೆ ಹೋಗಿದ್ದರು ಎನ್ನಲಾದ ಮಲ್ಲೇಶ್ವರಂನ ಮಂತ್ರಿ ಗ್ರೀನ್ಸ್ ಅಪಾರ್ಟ್‍ಮೆಂಟ್‍ಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ರು. ಬೆಳಗ್ಗೆ ಆರ್‍ಟಿ ನಗರದ ಪಿಜಿಗೆ ಸಂತ್ರಸ್ತೆಯನ್ನು ಎಸ್‍ಐಟಿ ಅಧಿಕಾರಿಗಳು, ಮಧ್ಯಾಹ್ನದವರೆಗೆ ಮಾಹಿತಿಯನ್ನು ಪಡೆದುಕೊಂಡ್ರು.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಪರೀಕ್ಷೆಗಳಿಗಾಗಿ ಪಿಜಿಯಲ್ಲಿದ್ದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡ್ರು. ಮಧ್ಯಾಹ್ನ 2 ಗಂಟೆ ನಂತ್ರ ಸಂತ್ರಸ್ತೆಯನ್ನು ಮಂತ್ರಿ ಗ್ರೀನ್ಸ್ ಗೆ ಅಪಾರ್ಟ್‍ಮೆಂಟ್‍ನ ಹದಿನಾಲ್ಕನೇ ಮಹಡಿಯಲ್ಲಿರುವ ರಮೇಶ್ ಜಾರಕಿಹೊಳಿ ಫ್ಲ್ಯಾಟ್‍ಗೆ ಕರೆದೊಯ್ದು ಪಂಚನಾಮೆ ಮಾಡಿದ್ರು. ಈ ವೇಳೆ ಕೆಲವೊಂದಿಷ್ಟು ಸಾಕ್ಷ್ಯಗಳನ್ನು ಎಸ್‍ಐಟಿ ಅಧಿಕಾರಿಗಳು ಸಂಗ್ರಹಿಸಿದ್ರು.

ಸಂತ್ರಸ್ತೆಗೆ ಕೆಲ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಇಲ್ಲಿಯೇ ರಮೇಶ್ ಜಾರಕಿಹೊಳಿ ತಮ್ಮ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ರು ಎಂದು ಸಂತ್ರಸ್ತೆ ಆರೋಪಿಸಿದ್ರು. ಕೃತ್ಯ ನಡೆದಿರುವ ಆ ಜಾಗದ ಸಿಬ್ಬಂದಿ ಮತ್ತು ಇತರೆ ವ್ಯಕ್ತಿಗಳಿಂದ ಎಸ್‍ಐಟಿ ಅಧಿಕಾರಿಗಳು ಹೇಳಿಕೆ ಪಡೆದುಕೊಂಡ್ರು. ಸಂಜೆ 7ರ ನಂತರ ಸಂತ್ರಸ್ತೆಯನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಯ್ತು.

ಸಂತ್ರಸ್ತೆ ಹೇಳಿದ್ದೇನು..?
ಆರ್‍ಟಿ ನಗರದ ಪಿಜಿಯಲ್ಲಿ ಒಂದೂವರೆ ವರ್ಷದಿಂದ ಇದ್ದೆ. ರಾಜಾಜಿನಗರದ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. 45 ಸಾವಿರ ಸಂಬಳ ಬರುತ್ತಿದ್ದ ಕಾರಣ ಪಿಜಿಯಲ್ಲಿ ಒಬ್ಬಳೆ ಇದ್ದೆ. ಇಲ್ಲಿದ್ದಾಗಲೇ ರಮೇಶ್ ಜಾರಕಿಹೊಳಿ ಪರಿಚಯ ಆಯಿತು.

ಜಾರಕಿಹೊಳಿ ಭೇಟಿ ಮಾಡುವ ಪಾಸ್ ಸಹ ಇಲ್ಲಿಯೇ ಇಟ್ಟಿದ್ದೆ. ಸಾಕಷ್ಟು ಬಾರಿ ರಮೇಶ್ ಜಾರಕಿಹೊಳಿ ವಿಡಿಯೋ ಕಾಲ್ ಮಾಡಿದ್ರು. ದೆಹಲಿಯ ಕರ್ನಾಟಕ ಭವನದಿಂದಲೂ ಜಾರಕಿಹೊಳಿ ಕರೆ ಮಾಡಿದ್ರು. ನಾನು ಪಿಜಿಯ ನನ್ನ ರೂಮ್‍ನಲ್ಲಿ ಇದ್ದುಕೊಂಡೇ ಮಾತನಾಡುತ್ತಿದ್ದೆ. ಸಾಕಷ್ಟು ಬಾರಿ ಜಾರಕಿಹೊಳಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರು ಎಂದು ಯುವತಿ ತಿಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *