ಮುಸುಕಿನ ಗುದ್ದಾಟ ಬಹಿರಂಗ – ಸಾರಾ ಹೇಳುತ್ತಿದ್ದಂತೆ ಸಭೆಯಿಂದ ತೆರಳಿದ ರೋಹಿಣಿ ಸಿಂಧೂರಿ

ಮೈಸೂರು: ಮೊದಲ ಬಾರಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾರಾ ಮಹೇಶ್ ಮುಖಾಮುಖಿಯಾಗಿದ್ದಾರೆ. ಆದರೆ ಮುಖಾಮುಖಿಯಾದ ಮೊದಲ ಸಭೆಯಲ್ಲೇ ಇಬ್ಬರ ಮುಸುಕಿನ ಗುದ್ದಾಟ ಬಹಿರಂಗವಾಗಿದೆ.

ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ವಿಧಾನಮಂಡಲ ಕಾಗದ ಪತ್ರಗಳ ಸಮಿತಿ ಸಭೆ ನಡೆಸಲಾಗಿತ್ತು. ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷ ಸಾರಾ ಮಹೇಶ್ ಹಾಜರಿದ್ದರು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿಗೆ ಆಸನದ ವ್ಯವಸ್ಥೆ ಇರಲಿಲ್ಲ. ಆಸನದ ವ್ಯವಸ್ಥೆ ಇರದ ಕಾರಣ ಜಿಲ್ಲಾಧಿಕಾರಿ ವೇದಿಕೆ ಮುಂಭಾಗದ ಕುರ್ಚಿಯಲ್ಲಿ ಕುಳಿತರು.

ಸಭೆಯಲ್ಲಿ ಡಿಸಿ ಮಾಸ್ಕ್ ಹಾಕಿಕೊಂಡು ಮಾತು ಆರಂಭಿಸಿದರು. ಆಗ ಸಾರಾ ಮಹೇಶ್ ಅವರು, ನಿಮ್ಮ ಮಾತು ಕೇಳುತ್ತಿಲ್ಲ. ಮಾಸ್ಕ್ ತೆಗೆದು ಮಾತನಾಡಿ ಎಂದರು. ನಾನು ಮಾಸ್ಕ್ ತೆಗೆಯವುದಿಲ್ಲ, ಮಾಸ್ಕ್ ತೆಗೆದು ಮಾತನಾಡಬಾರದು. ಅದಕ್ಕಾಗಿ ಮಾಸ್ಕ್ ತೆಗೆಯುವುದಿಲ್ಲ ಎಂದು ಡಿಸಿ, ಸಾರಾ ಮಹೇಶ್ ಗೆ ಉತ್ತರ ಕೊಟ್ಟರು. ಈ ಸಭೆಯಲ್ಲಿ ನನಗೆ ಸಂಬಂಧಿಸಿದ ವಿಷಯಗಳ ಚರ್ಚೆ ಇಲ್ಲ. ಹಾಗಾಗಿ ನೀವು ಸಮ್ಮತಿಸಿದರೆ ನಾನು ಸಭೆಯಿಂದ ಹೋಗುತ್ತೇನೆ ಎಂದು ಡಿಸಿ ಹೇಳಿದರು.

ಈ ವೇಳೆ ಡಿಸಿ ಮಾತಿಗೆ ಉತ್ತರಿಸಿದ ಸಾರಾ ನಿಮ್ಮನ್ನು ನಾವು ಸಭೆಗೆ ಕರೆದಿರಲಿಲ್ಲ. ಆದರೂ ತಾವು ಸಭೆಗೆ ಬಂದಿದ್ದಿರಿ ಸಂತೋಷ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಯಾವುದೇ ಸಭೆಯ ಮಾಹಿತಿ ಕೊಡುವುದು ಕರ್ತವ್ಯ. ಅದಕ್ಕೆ ಮಾಹಿತಿ ಕೊಟ್ಟಿದ್ದೇವೆ ಅಷ್ಟೇ. ಮೈಸೂರಿಗೆ ಬಂದ ಕಾಗದ ಪತ್ರಗಳ ಸಮಿತಿಯನ್ನು ನೀವು ಸ್ವಾಗತಿಸಿಲ್ಲ. ಆದರೂ ಪರವಾಗಿಲ್ಲ. ಸಮಯ ಇದ್ರೆ ಇರಿ, ಬೇರೆ ಕೆಲಸ ಇದ್ರೆ ಹೋಗಿ ಎಂದು ಸಾರಾ ಮಹೇಶ್ ಹೇಳಿದರು. ಸಾರಾ ಈ ರೀತಿ ಹೇಳುತ್ತಿದ್ದಂತೆಯೇ ಸಭೆಯಿಂದ ತಕ್ಷಣವೇ ಡಿಸಿ ಕಾರು ಹತ್ತಿ ಬೇಸರದಿಂದ ತೆರಳಿದರು.

Comments

Leave a Reply

Your email address will not be published. Required fields are marked *