ಮುಂದೆ ರಾಜಕೀಯ ಧ್ರುವೀಕರಣ, ಒಂದು ಪಕ್ಷವೇ ವಿಲೀನವಾಗಬಹುದು – ಲಿಂಬಾವಳಿ

ಬೆಂಗಳೂರು: ಮುಂದಿನ ದಿನದಲ್ಲಿ ರಾಜಕೀಯ ಧ್ರುವೀಕರಣ ನಡೆಯಲಿದೆ ಎಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಮತ್ತು ವಕ್ತಾರ ಅರವಿಂದ ಲಿಂಬಾವಳಿ ಸ್ಫೋಟಕ ಹೇಳಿಕೆ ಹೇಳಿದ್ದಾರೆ.

ರಾಜಕಿಯ ಧ್ರುವೀಕರಣ ಯಾವ ಥರ ಆಗುತ್ತೆ ಅಂತ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಭದ್ರವಾಗಲಿದೆ. ಪತ್ರಿಕೆಯವರ ಮೂಲಕ ಒಂದು ರಾಜಕೀಯ ಪಕ್ಷವೇ ವಿಲೀನವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದಾರೆ.

ಮೋದಿ ಅಲೆ, ಬಿಜೆಪಿ ಅಲೆ ದೇಶದಲ್ಲಿ ಇದೆ. ಸಮ್ಮಿಶ್ರ ಸರ್ಕಾರದಲ್ಲಿದ್ದವರೇ ಈಗ ಕಿತ್ತಾಡುತ್ತಿದ್ದಾರೆ. ದೇಶ, ರಾಜ್ಯದಲ್ಲಿ ಆಡಳಿತ ಸುಭದ್ರವಾಗಿದೆ ಎನ್ನುವುದರ ಸಂಕೇತವಿದು. ನಮ್ಮ ವರದಿ ಪ್ರಕಾರ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ನಮ್ಮ ಪಕ್ಷದ ಶೇ.70 ರಿಂದ 80 ರಷ್ಟು ಕಾರ್ಯಕರ್ತರು ಜಯ ಸಾಧಿಸುತ್ತಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್‌ ಚುನಾವಣೆ ಪಕ್ಷಾತೀತ ಚುನಾವಣೆಯಾಗಿದ್ದು, ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸಹ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಗೆ ಗ್ರಾಮ ಪಂಚಾಯತ್ ಚುನಾವಣೆ ಮಹತ್ವದ್ದ. ದೊಡ್ಡ ಸಂಖ್ಯೆಯಲ್ಲಿ ಗ್ರಾಮಕ್ಕೆ ಅನುಕೂಲ ಮಾಡುವವರು ಗೆದ್ದು ಬರಬೇಕು. ನಮ್ಮ ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಒಳ ಜಗಳ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಎಚ್ ಸಿ ಮಹಾದೇವಪ್ಪ ದನಿಗೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೈಖರಿ ಖಂಡಿಸಿ 18 ಜನ ರಾಜೀನಾಮೆ ಕೊಟ್ಟರು. ಈಗ ರಾಜ್ಯದಲ್ಲಿ ಸ್ಥಿರ ಸರ್ಕಾರ ಇದೆ. ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧವೂ ಮಾತಾಡಿದ್ದಾರೆ. ಇದಕ್ಕೆ ಎಚ್ಡಿಕೆ ಸಹ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಹೇಳಿದರು.

ಜನವರಿ 2, 3 ರಂದು ಶಿವಮೊಗ್ಗದಲ್ಲಿ ಕೋರ್ ಕಮಿಟಿ ಸಭೆ ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಜನಪ್ರತಿನಿಧಿಗಳ ಸಮಾವೇಶ ಜನವರಿ 8 ರಿಂದ 11 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಡಿ.25 ರಂದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾಗಿದ್ದು ಆ ದಿನವನ್ನು ಬಿಜೆಪಿ ರೈತರ ದಿನ ಎಂದು ಆಚರಿಸಲಿದೆ. ಆ ದಿನ ಹಲವು ಕಡೆ ರೈತರ ಸಮಾವೇಶಗಳು ಆಯೋಜನೆ ಆಗಲಿದೆ. ಕೃಷಿ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆ ದಿನ ಮಾಡ್ತೇವೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಪ್ರಧಾನಿಯವರು ರೈತರನ್ನುದ್ದೇಶಿಸಿ ಮಾತಾಡ್ತಾರೆ. ಪ್ರಧಾನಿಯವರ ಭಾಷಣವನ್ನು ಜನರ ಬಳಿ ತಲುಪಿಸಲು ಅಲ್ಲಲ್ಲಿ ಟಿವಿ ಸ್ಕ್ರೀನ್ ಗಳನ್ನು ಹಾಕುತ್ತೇವೆ ಎಂದು ವಿವರಿಸಿದರು.

ಬಿಜೆಪಿ ಮೇಲೆ ಜೆಡಿಎಸ್ ಸಾಫ್ಟ್ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಿಂಬಾವಳಿ, ಜೆಡಿಎಸ್ ಬಿ ಟೀಂ ಎಂಬ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಜೆಡಿಎಸ್ ನಮ್ಮ ಬಿ ಟೀಂ ಆಗಿದ್ದಿದ್ರೆ, ವಿಧಾನಸಭೆ ಚುನಾವಣೆ ಬಳಿಕ ಸಿ ಟೀಂ ಜತೆ ಯಾಕೆ ಹೋದರು? ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಇಲ್ಲ. ಹಾಗಾಗಿ ಗೋಹತ್ಯೆ ಮಸೂದೆ ಮಂಡನೆ ಆಗಲಿಲ್ಲ. ಜೆಡಿಎಸ್ ಅನೇಕ ವಿಚಾರಗಳಲ್ಲಿ ನಮ್ಮ ವಿರೋಧವೂ ಮಾಡಬಹುದು. ವಿಷಾಯಾಧಾರಿತವಾಗಿ ಜೆಡಿಎಸ್ ನಡೆದುಕೊಳ್ಳುತ್ತದೆ ಎಂದು ಉತ್ತರಿಸಿದರು.

Comments

Leave a Reply

Your email address will not be published. Required fields are marked *