ಮೀನು ಹಿಡಿಯಲು ತೆರಳಿದ್ದ ಉಡುಪಿಯ ಖ್ಯಾತ ಕಲಾವಿದ ಸಾವು

ಉಡುಪಿ: ಮೀನು ಹಿಡಿಯಲು ತೆರಳಿದ್ದ ಕಲಾವಿದರೊಬ್ಬರು ನೀರು ಪಾಲಾಗಿರುವ ಘಟನೆ ಉದ್ಯಾವರ ಸಂಪಿಗೆನಗರದ ಬಬ್ಬರ್ಯಗುಡ್ಡದ ನದಿಯಲ್ಲಿ ನಡೆದಿದೆ.

ನೀರು ಪಾಲಾಗಿರುವ ವ್ಯಕ್ತಿಯನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ಆಸ್ಟಿನ್ ಮಚಾದೋ ಎಂದು ಗುರುತಿಸಲಾಗಿದೆ. ಮರುವಾಯಿ ಎಂಬ ಚಿಪ್ಪು ಮೀನು ಹೆಕ್ಕಲು ತೆರಳಿದ್ದ ಆಸ್ಟಿನ್ ನೀರಿನ ಸೆಳೆತಕ್ಕೆ ಮುಳುಗಿ ಸಾವನ್ನಪ್ಪಿದ್ದಾರೆ.

ಮಚಾದೋ ಓರ್ವ ಉತ್ತಮ ನಾಟಕ ಹಾಗೂ ಚಿತ್ರ ಕಲಾವಿದರಾಗಿದ್ದರು. ಫ್ರೆಂಡ್ಸ್ ಗಾರ್ಡನ್ ಅರೂರುತೋಟ, ಸಿವೈಎ ತುಳುವರ ಬಳಗ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಆಸ್ಟಿನ್ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಹುಲಿ ವೇಷ ಸೇರಿದಂತೆ ಇತರ ಹಲವಾರು ವೇಷಧಾರಿಗಳಿಗೆ ಬಣ್ಣವನ್ನು ನೀಡುತ್ತಿದ್ದರು. ಹಾಗೆ ಉತ್ತಮ ಕ್ರಿಕೆಟ್ ಪಟುವಾಗಿ, ನೃತ್ಯಗಾರರಾಗಿ ಹೆಸರುವಾಸಿಯಾಗಿದ್ದ ಆಸ್ಟಿನ್ ಜಿಲ್ಲೆಯಾದ್ಯಂತ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಆಸ್ಟಿನ್ ಸಾವಿರಾರು ಜನ ಬಂಧು ಮಿತ್ರರನ್ನು ಅಗಲಿದ್ದಾರೆ.

Comments

Leave a Reply

Your email address will not be published. Required fields are marked *