ಮಿಂಚು ಬಡಿದು 23 ಮಂದಿ ದುರ್ಮರಣ, 29 ಜನರಿಗೆ ಗಾಯ

ಲಕ್ನೋ: ಶನಿವಾರ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಮಿಂಚು ಬಡಿದು ಸುಮಾರು 23 ಮಂದಿ ಸಾವನ್ನಪ್ಪಿದರೆ, ಸುಮಾರು 29 ಮಂದಿಗೆ ಗಾಯವಾಗಿದೆ.

ಅಧಿಕಾರಿಗಳ ಅಧಿಕೃತ ಹೇಳಿಕೆಯ ಪ್ರಕಾರ, ಅಲಹಾಬಾದ್‍ನಲ್ಲಿ ಎಂಟು, ಮಿರ್ಜಾಪುರದಲ್ಲಿ ಆರು, ಕೌಶಂಬಿಯಲ್ಲಿ ಇಬ್ಬರು ಮತ್ತು ಜಾನ್‍ಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಹಾಗೂ ರೀಲಿಫ್ ಕಮಿಷನರ್ ಆಫೀಸ್ ವರದಿಯ ಪ್ರಕಾರ ಪ್ರಯಾಗರಾಜ್‍ನಲ್ಲಿ 9 ಮಂದಿ, ಮಿರ್ಜಾಪುರದಲ್ಲಿ 10 ಮತ್ತು ಕೌಶಂಬಿಯಲ್ಲಿ ನಾಲ್ವರು ಗಂಭೀರ ಸುಟ್ಟಗಾಯಗಳಿಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಿಂಚಿಗೆ ಬಲಿಯಾದವರ ಕುಟುಂಬಕ್ಕೆ 4 ಲಕ್ಷ ರೂ. ಗಳ ಪರಿಹಾರವನ್ನು ನೀಡುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರ ಪ್ರದೇಶದ ಭಡೋಹಿನ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ಮಿಶ್ರಾ ಮಾತನಾಡಿ, ವರದಿಯ ಪ್ರಕಾರ ನಮ್ಮ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರು ಜನರು ಮಿಂಚು ಬಡಿದು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಜೆ ತಡವಾಗಿ ಮಿಂಚು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *