ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿಲ್ಪಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್

ಮುಂಬೈ: ನನ್ನ ಕುಟುಂಬದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಮಾಧ್ಯಮ ಪ್ರಕಟಿಸುತ್ತಿವೆ ಎಂದು ಕೋರ್ಟ್ ಮೊರೆ ಹೋಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮಾಧ್ಯಮಗಳು ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಖಾಸಗಿತನಕ್ಕೆ ಚ್ಯುತಿ ತರುತ್ತಿವೆ ಎಂದು ಕೋರ್ಟ್‍ಗೆ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಶಿಲ್ಪಾ ಶೆಟ್ಟಿ ಉಲ್ಲೇಖ ಮಾಡಿದ್ದರು. ಅಲ್ಲದೆ, ತಮಗೆ 25 ಕೋಟಿ ರೂ. ಮತ್ತು ಅದರೊಂದಿಗೆ ವರ್ಷಕ್ಕೆ ಶೇ.18 ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಕೋರಿದ್ದರು. ಈ ಕುರಿತಾಗಿ ಕೋರ್ಟ್ ಶಿಲ್ಪಾ ಶೆಟ್ಟಿಯವರನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ

ನ್ಯಾಯಮೂರ್ತಿ ಜಿಎಸ್ ಪಟೇಲ್ ಅವರು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡರು. ಓದುಗರನ್ನು ಸೆಳೆಯಲು ತಪ್ಪಾದ ಸುದ್ದಿ ಪ್ರಕಟ ಮಾಡಲಾಗಿದೆ ಎಂದು ಶಿಲ್ಪಾ ಶೆಟ್ಟಿ ಪರ ವಕೀಲರು ವಾದ ಮಂಡಿಸಿದರು. ಶಿಲ್ಪಾ ಶೆಟ್ಟಿಗೆ ಮಾನನಷ್ಟವಾಗಲು ಕಾರಣವೇನು? ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಇದು ಅವರ ಜೀವನದ ಒಂದು ಭಾಗ. ಈ ಹಿಂದೆ ಕೂಡ ಈ ವಿಚಾರಕ್ಕೆ ಸಂಬಂಧಿಸಿ ಹಲವು ತೀರ್ಪು ನೀಡಲಾಗಿತ್ತು. ಎಷ್ಟು ಬಾರಿ ಇದನ್ನೇ ಹೇಳಬೇಕು ಪೊಲೀಸ್ ಮೂಲಗಳು ಹೇಳಿವೆ ಎಂದು ವರದಿಯಾದರೆ ಅದು ಎಂದಿಗೂ ಮಾನಹಾನಿಯಾಗುವುದಿಲ್ಲ. ಶಿಲ್ಪಾ ಶೆಟ್ಟಿ ಅತ್ತಿದ್ದಾರೆ ಎಂದು ವರದಿ ಪ್ರಕಟ ಮಾಡಿದರೆ ಅದು ಮಾನ ಹಾನಿ ಹೇಗಾಗುತ್ತದೆ? ಎಂದು ನ್ಯಾಯಮೂರ್ತಿ ಜಿಎಸ್ ಪಟೇಲ್ ಅವರು ಶಿಲ್ಪಾ ಶೆಟ್ಟಿ ಪರ ವಕೀಲರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ರಬ್ಬರ್‌ ಸ್ಟಾಂಪ್ ಮುಖ್ಯಮಂತ್ರಿ: ಸಿದ್ದರಾಮಯ್ಯ

ರಾಜ್ ಕುಂದ್ರಾ ಅವರ ಅಶ್ಲೀಲ ಸಿನಿಮಾ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಹೆಸರು ಮುನ್ನೆಲೆಗೆ ಬಂದಿತ್ತು. ಇವರ ಬಗ್ಗೆ ನಾನಾ ಸುದ್ದಿಗಳು ಪ್ರಸಾರಗೊಂಡವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಲ್ಪಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಮಾನನಷ್ಟ ಮೊಕದ್ದಮೆ ಸಲ್ಲಿಕೆ ಮಾಡಿದ್ದಾರೆ.  ಇದನ್ನೂ ಓದಿ:ಅಶ್ಲೀಲ ಸಿನಿಮಾ ಅಲ್ಲ, ಅದು ಸಾಫ್ಟ್ ಪೋರ್ನ್: ರಾಜ್ ಕುಂದ್ರಾ ಮಾಜಿ ಉದ್ಯೋಗಿ ತನ್ವೀರ್

Comments

Leave a Reply

Your email address will not be published. Required fields are marked *