ಮಾದಪ್ಪನ ಭಕ್ತರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಪ್ರವೇಶ ಶುಲ್ಕದ ಹೊರೆ

ಚಾಮರಾಜನಗರ: ಪ್ರಸಿದ್ದ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‍ಗಳಿಗೂ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಈ ಪ್ರವೇಶ ಶುಲ್ಕದ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಿದೆ.

ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರಲಿಲ್ಲ. ಆದರೆ, ಎಲ್ಲಾ ರೀತಿಯ ಸೇವಾದರಗಳನ್ನು ಹೆಚ್ಚಳ ಮಾಡಿದ್ದ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಮೊದಲ ಬಾರಿಗೆ ಪ್ರವೇಶ ಶುಲ್ಕ ನಿಗದಿಪಡಿಸಿತ್ತು. ಕೊಳ್ಳೇಗಾಲ ಗೇಟ್ ಹಾಗೂ ಪಾಲಾರ್ ಗೇಟ್‍ಗಳ ಮೂಲಕ ಮಹದೇಶ್ವರ ಬೆಟ್ಟಕ್ಕೆ ಬರುವ ಬಸ್‍ಗಳ ಪ್ರತಿ ಟ್ರಿಪ್‍ಗೂ 50 ರೂ.ಗಳಂತೆ ಪ್ರವೇಶ ದರ ನಿಗದಿಪಡಿಸಲಾಗಿದೆ.

ನಿಗಮಕ್ಕೆ ಆರ್ಥಿಕ ನಷ್ಟದಲ್ಲಿರುವ ಕಾರಣ ಈ ಹೊರೆಯನ್ನು ಸರಿದೂಗಿಸುವ ಸಲುವಾಗಿ ಪ್ರವೇಶ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಲು ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ.

ಪ್ರತಿ ಪ್ರಯಾಣಿಕರಿಂದ ತಲಾ ಒಂದು ರೂಪಾಯಿಯಂತೆ ಹೆಚ್ಚುವರಿ ದರ ವಸೂಲಿ ಮಾಡುವಂತೆ ಸೂಚಿಸಲಾಗಿದೆ. ಹಾಗಾಗಿ ಪ್ರವೇಶ ಶುಲ್ಕದ ಹೊರೆಯು ಭಕ್ತರ ಮೇಲೆ ಬಿದ್ದಂತಾಗಿದೆ.

Comments

Leave a Reply

Your email address will not be published. Required fields are marked *