ಮಾದಕ ವಸ್ತು ಜಾಲವನ್ನು ಸರ್ಕಾರ ಮಟ್ಟ ಹಾಕಬೇಕು – ದಿನೇಶ್ ಗುಂಡೂರಾವ್

ಬೆಂಗಳೂರು: ಮಾದಕ ವ್ಯಸನಕ್ಕೆ ಅತಿ ಹೆಚ್ಚು ಬಲಿಯಾಗುವುದೇ ಯುವಕರು ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ಗುರುವಾರ ಮೂವರ ಹೈಟೆಕ್ ಡ್ರಗ್ ಪೆಡ್ಲರ್ ಗಳನ್ನು ಎನ್‍ಸಿಬಿ ಬೆಂಗಳೂರಿನಲ್ಲಿ ಬಂಧಿಸಿತ್ತು. ಈ ಮೂವರು ನೀಡಿದ ಮಾಹಿತಿಯಂತೆ ಡ್ರಗ್ಸ್ ದಂಧೆಯಲ್ಲಿ ಕೆಲ ಕನ್ನಡ ನಟ-ನಟಿಯರು ಮತ್ತು ಸಂಗೀತ ನಿರ್ದೇಶಕರು ಇರುವುದು ಗೊತ್ತಾಗಿತ್ತು. ಈಗ ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಡ್ರಗ್ ಪೆಡ್ಲರ್ ಗಳ ಜೊತೆ ಕನ್ನಡ ಚಿತ್ರರಂಗದ ಕೆಲವರ ನಂಟು ಆಘಾತಕಾರಿ ಎಂದಿದ್ದಾರೆ.

ರಾಜ್ಯದಲ್ಲಿ ಮಾದಕ ದ್ರವ್ಯದ ದೊಡ್ಡ ಜಾಲವೇ ಪತ್ತೆಯಾಗಿದೆ. ಡ್ರಗ್ ಪೆಡ್ಲರ್ ಗಳ ಜೊತೆ ಕನ್ನಡ ಚಿತ್ರರಂಗದ ಕೆಲವರ ನಂಟು ಇದೆ ಎಂಬ ಮಾತು ಆಘಾತಕಾರಿ. ಮಾದಕ ವ್ಯಸನಕ್ಕೆ ಅತಿ ಹೆಚ್ಚು ಬಲಿಯಾಗುವುದೇ ಯುವ ಸಮುದಾಯ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾದಕ ವಸ್ತು ಜಾಲವನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.

ಚಂದನವದನದಲ್ಲಿ ಡ್ರಗ್ಸ್ ಘಾಟು ಜೋರಾಗಿದೆ. ಇದರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಚಿತ್ರರಂಗದಲ್ಲಿ ಇರುವ ಕೆಲವರು ನಮ್ಮಲ್ಲಿ ಕಲಾವಿದರು ಡ್ರಗ್ಸ್ ತೆಗೆದುಕೊಳ್ಳವ ಪದ್ಧತಿ ಇಲ್ಲ ಎನ್ನುತ್ತಿದ್ದಾರೆ. ಆದರೆ ನಟ-ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು, ನಮ್ಮ ಕನ್ನಡ ಚಿತ್ರರಂಗದ ಮೂರನೇ ಪೀಳಿಗೆಯ ಮತ್ತು ಯುವ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *