ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿರಬಹುದು. ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಯಾರು ಮಾತನಾಡುತ್ತಾರೆ ಎಂದು ಕೇಳಿದರೆ ಅದು ಮಂಜು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ಬಿಗ್‍ಬಾಸ್.. ದೊಡ್ಮನೆ ಸದಸ್ಯರಿಗೆ ಮಾತುಗಾರ ಎಂಬ ಚಟುವಟಿಕೆಯೊಂದನ್ನು ನೀಡಿದ್ದರು. ಅದರ ಅನುಸಾರ ಮನೆಯ ಎಲ್ಲ ಸದಸ್ಯರು ಇಡೀ ಮನೆಯಲ್ಲಿ ಹೆಚ್ಚಾಗಿ ಮಾತನಾಡುವ ಸದಸ್ಯರನ್ನು ಆರಿಸಿ ಪ್ಲಾಸ್ಟರ್ ಬ್ಯಾಡ್ಜ್‍ನನ್ನು ನೀಡಬೇಕು ಹಾಗೂ ಅತೀ ಕಡಿಮೆ ಮಾತನಾಡುವ ಸದಸ್ಯರಿಗೆ ಮೈಕ್ ಬ್ಯಾಡ್ಜ್ ನನ್ನು ನೀಡಬೇಕು ಎಂದು ಸೂಚಿಸಿದ್ದರು.

ಈ ಚಟುವಟಿಕೆ ಆರಂಭಿಸಿದ ನಿಧಿ, ಮಂಜು ಮಾತೆಂದರೆ ನನಗೆ ಬಹಳ ಇಷ್ಟ. ಆದರೆ ಒಮ್ಮೊಮ್ಮೆ ಅವರ ಮಾತು ನನಗೆ ತಲೆನೋವು ಬರಿಸುತ್ತದೆ ಅಂತಾರೆ. ಇನ್ನು ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನು ಮಾತಿನ ಮೂಲಕ ಆಕರ್ಷಿಸುವ ವ್ಯಕ್ತಿ ಮಂಜು ಎಂದು ಶಂಕರ್ ಹೇಳುತ್ತಾರೆ. ನಂತರ ಪ್ರಶಾಂತ್ ಸಂಬರ್ಗಿ ಮಾತು ಬೆಳ್ಳಿ, ಮೌನ ಚಿನ್ನ ಆದರೆ ಮಾತು ಹೆಚ್ಚಾದರೆ ಗಾರ್ಬೆಜ್ ಎಂದು ಹೇಳಿ ಪ್ಲಾಸ್ಟರ್ ನೀಡುತ್ತಾರೆ. ಮಂಜು ಮಾತನಾಡುವಾಗ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಅಂತ ಶಮಂತ್ ಹೇಳಿದರೆ, ಅರವಿಂದ್.. ನಿದ್ರೆಯ ಗೋರಕೆಯಲ್ಲಿ ಮಾತನಾಡುವ ವ್ಯಕ್ತಿ ಅಂದರೆ ಅದು ಮಂಜು ಅಂತ ಸೂಚಿಸುತ್ತಾರೆ. ಹೀಗೆ ವೈಷ್ಣವಿ ಸೇರಿದಂತೆ ಮನೆಯ ಬಹುತೇಕ ಮಂದಿ ಮಂಜುರನ್ನು ಮಾತುಗಾರ ಎಂದು ಸೂಚಿಸಿ ಪ್ಲಾಸ್ಟರ್ ನೀಡುತ್ತಾರೆ.

ಮನೆಯಲ್ಲಿ ಕಡಿಮೆ ಮಾತನಾಡುವ ವ್ಯಕ್ತಿ ಎಂದರೆ ವೈಷ್ಣವಿ ಅವರು ಹೆಚ್ಚಾಗಿ ಮಾತನಾಡಬೇಕು ಎಂದು ದಿವ್ಯಾ ಸುರೇಶ್, ಶಂಕರ್, ಶಮಂತ್, ಶುಭ ಹೀಗೆ ಮನೆಯ ಹೆಚ್ಚಿನ ಮಂದಿ ಸೂಚಿಸುತ್ತಾರೆ.

ಹೀಗೆ ಮನೆಯಲ್ಲಿ ಹೆಚ್ಚು ಮಾತನಾಡುವ ಸದಸ್ಯ ಮಂಜುಗೆ ಪ್ಲಾಸ್ಟರ್ ಬ್ಯಾಡ್ಜ್ ದೊರೆತ ಹಿನ್ನೆಲೆ ನಿನ್ನೆ ಬಿಗ್‍ಬಾಸ್ ತಮ್ಮ ಮುಂದಿನ ಆದೇಶದವರೆಗೂ ಮಂಜು ಮಾತನಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಏನೇ ಮಾತನಾಡಬೇಕದರೂ ನೇರವಾಗಿ ಮಾತನಾಡದೇ ವೈಷ್ಣವಿ ಮೂಲಕವೇ ಮಾತನಾಡಬೇಕೆಂದು ಹೇಳಿದರು. ಜೊತೆಗೆ ವೈಷ್ಣವಿಯೊಂದಿಗೆ ಕೂಡ ಪದ ಬಳಕೆ ಮಾಡದೇ ಸನ್ನೆ, ಮೂಕ ಅಭಿನಯ, ನಟನೆಯೊಂದಿಗೆ ಅರ್ಥಮಾಡಿಸಬೇಕು ಎಂದು ತಿಳಿಸಿದರು. ಇದನ್ನು ಕೇಳಿದ ಮನೆಯ ಸದಸ್ಯರು ಹೊಟ್ಟೆ ಬಿರಿಯುಷ್ಟು ನಗುತ್ತಾ ಎಂಜಾಯ್ ಮಾಡಿದರು.

ಒಟ್ಟಾರೆ ಪಟಾಕಿಯಂತೆ ಯಾವಾಗಲೂ ಮಾತನಾಡುತ್ತಿದ್ದ ಮಂಜು ಬಾಯಿಗೆ ಬಿಗ್‍ಬಾಸ್ ಬೀಗ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

Comments

Leave a Reply

Your email address will not be published. Required fields are marked *