ಮಾಜಿ ಸಚಿವ ಯು.ಟಿ ಖಾದರ್ ಕಾರು ಫಾಲೋ ಮಾಡ್ಕೊಂಡು ಬಂದ ಅಪರಿಚಿತರು!

ಮಂಗಳೂರು: ಅಪರಿಚಿತ ವ್ಯಕ್ತಿಗಳು ಮಾಜಿ ಸಚಿವ ಯು.ಟಿ ಖಾದರ್ ಕಾರು ಫಾಲೋ ಮಾಡಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಅಪರಿಚಿತರು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಸುಮಾರು ಹತ್ತು ಕಿ.ಮೀ ವರೆಗೂ ಖಾದರ್ ಕಾರಿನ ಹಿಂದೆ ಬಂದಿದ್ದಾರೆ. ಆಗ ಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರು ಬೈಕ್ ತಡೆಹಿಡಿದಿದ್ದಾರೆ. ನಂತೂರು ಬಳಿ ಎಸ್ಕಾರ್ಟ್ ವಾಹನ ನಿಲ್ಲಿಸಿ ಬೈಕಿನ ಹಿಂದೆ ಪೊಲೀಸರು ಓಡಿದ್ದಾರೆ. ತಕ್ಷಣ ಎಚ್ಚೆತ್ತ ಬೈಕ್ ಸವಾರರು ಬೈಕ್ ತಿರುಗಿಸಿ ಪರಾರಿಯಾಗಿದ್ದಾರೆ.

ಖಾದರ್ ಎಸ್ಕಾರ್ಟ್ ವಾಹನದ ಎಎಸ್‍ಐ ಸುಧೀರ್ ಮಾಹಿತಿಯಂತೆ ಅಪರಿಚಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಪರಿಚಿತ ಬೈಕ್ ಸವಾರರು ಕೆಲ ಕಾಲ ಆತಂಕ ಸೃಷ್ಟಿಸಿದ್ದಾರೆ. ಬೈಕ್ ನಂಬರ್ ನೋಟ್ ಮಾಡಿಕೊಂಡಿರುವ ಪೊಲೀಸರು ವಿಳಾಸ ಪತ್ತೆಗಿಳಿದಿದ್ದಾರೆ.

ಖಾದರ್ ಅವರು ಬೆಂಗಳೂರಿಗೆ ತೆರಳಲು ದೇರಳಕಟ್ಟೆಯಿಂದ ಪೊಲೀಸ್ ಎಸ್ಕಾರ್ಟ್ ನಲ್ಲಿ ಏರ್ ಪೋರ್ಟಿಗೆ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *