ಮಹಾಮಾರಿ ಕೊರೊನಾ ಗೆದ್ದ 7 ವರ್ಷದ ಮಕ್ಕಳು

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಜಗತ್ತಿನ ಮೇಲೆ ಸವಾರಿ ಹೆಚ್ಚು ಮಾಡುತ್ತಿರುವ ಕೊರೊನಾ ವೈರಸ್ ಈಗಾಗಲೇ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇತ್ತ ಹಲವರು ಮಹಾಮಾರಿಯ ವಿರುದ್ಧ ಹೋರಾಟ ಮಾಡಿ ಗುಣಮುಖರಾಗುತ್ತಿದ್ದು, ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಏಳು ವರ್ಷದ ಇಬ್ಬರು ಮಕ್ಕಳು ಕೊರೊನಾಗೆ ಸೆಡ್ಡು ಹೊಡೆದಿದ್ದಾರೆ.

ಮೇ 19 ಹಾಗೂ 22 ರಂದು ಕೊರೊನಾ ಪಾಸಿಟಿವ್ ಬಂದಿದ್ದ ಇಬ್ಬರು ಮಕ್ಕಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬದುಕಿನ ಅನಿವಾರ್ಯತೆಗೆ ಮುಂಬೈ ಸೇರಿದ್ದ ಇವರು ಕೊರೊನಾ ಲಾಕ್‍ಡೌನ್ ಹಿನ್ನೆಲೆ ಉದ್ಯೋಗವಿಲ್ಲದೆ ಊರಿಗೆ ಹಿಂದಿರುಗಿದ್ದರು. ಟೆಂಪೋದಲ್ಲಿ ಬಂದಿದ್ದ ಎಲ್ಲರನ್ನೂ ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‍ಗೆ ಒಳಪಡಿಸಿ, ಪರೀಕ್ಷೆ ನಡೆಸಲಾಗಿತ್ತು.

ಮೇ 19 ಹಾಗೂ 22 ರಂದು ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಕೂಡಲೇ ಅವರನ್ನ ಚಿಕ್ಕಮಗಳೂರು ನಗರದ ಕೋವಿಡ್ 19 ಆಸ್ಪತ್ರೆ ದಾಖಲಿಸಲಾಗಿತ್ತು. ಕಳೆದ ಎಂಟತ್ತು ದಿನಗಳಿಂದ ನಿರಂತರ ಚಿಕಿತ್ಸೆಯ ಬಳಿಕ ಇಂದು ಇಬ್ಬರು ಮಕ್ಕಳು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಇಬ್ಬರು ಮಕ್ಕಳು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಪಟ್ಟು 18 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಅದರಲ್ಲಿ ತರೀಕೆರೆ ಗರ್ಭಿಣಿ ಹಾಗೂ ಮೂಡಿಗೆರೆಯ ವೈದ್ಯರ ಪಾಸಿಟಿವ್ ಕೇಸ್‍ನ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‍ನಲ್ಲಿ ಪರೀಕ್ಷೆಯ ಬಳಿಕ ನೆಗೆಟಿವ್ ಎಂದು ವರದಿ ಬಂದಿದ್ದು, ಜಿಲ್ಲೆಯಲ್ಲಿ 14 ಸಕ್ರಿಯ ಪ್ರಕರಣಗಳಿವೆ.

Comments

Leave a Reply

Your email address will not be published. Required fields are marked *