ಮಹಾಮಳೆಗೆ ಮಲೆನಾಡಲ್ಲಿ ಆರನೇ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಮೈದುಂಬಿ ಹರಿಯುತ್ತಿರೋ ನದಿಗಳಿಂದ ಸಾವು ಸಂಭವಿಸೋದು ಮಾತ್ರ ನಿಂತಿಲ್ಲ. ಗುರುವಾರ ಕೂಡ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ವರುಣ ಅಬ್ಬರಕ್ಕೆ ಆರು ಜನ ಪ್ರಾಣ ತೆತ್ತಂತಾಗಿದೆ.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಪ್ರಮಾಣ ಬಹುತೇಕ ತಗ್ಗಿದೆ. ಆದರೆ ಘಟ್ಟಪ್ರದೇಶಗಳಲ್ಲಿ ಸುರಿಯುವ ಸಾಧಾರಣ ಮಳೆ ಬರುತ್ತಿರುವುದರಿಂದ ಜಿಲ್ಲೆಯ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಇಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದ ಮಹಿಳೆ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರನ್ನ 55 ವರ್ಷದ ದೇವಮ್ಮ ಎಂದು ಗುರುತಿಸಲಾಗಿದೆ.

ದೇವಮ್ಮ ನಿನ್ನೆ ಕೂಡ ಎಂದಿನಂತೆ ಗದ್ದೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಗದ್ದೆಯ ಬದಿನ ಮೇಲೆ ಹೋಗುವಾಗ ಕಾಲು ಜಾರಿ ಹೇಮಾವತಿ ನದಿಗೆ ಬಿದ್ದು ಪ್ರಾಣ ತೆತ್ತಿದ್ದಾರೆ. ಕೂಡಲೇ ಸ್ಥಳಿಯರು ದೇವಮ್ಮನಿಗಾಗಿ ಹುಡುಕಾಟ ನಡೆಸಿದರು. ಆದರೆ ಹೇಮಾವತಿ ವೇಗವಾಗಿ ಹರಿಯುತ್ತಿದ್ದ ಕಾರಣ ಸಾಧ್ಯವಾಗಿಲ್ಲ. ದೇವಮ್ಮ ಹೇಮಾವತಿ ನದಿಗೆ ಬಿದ್ದ ಜಾಗದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಾವಿನೊಂದಿಗೆ ಜಿಲ್ಲೆಯಲ್ಲಿ ಪ್ರಾಣ ತೆತ್ತಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಲ್ಲಿ ಮೂಡಿಗೆರೆ 3, ಶೃಂಗೇರಿ 1, ಚಿಕ್ಕಮಗಳೂರು 1, ಕಡೂರು 1 ಸೇರಿದಂತೆ ಒಂದೇ ವಾರದ ಮಲೆನಾಡ ಮಳೆ ಅಬ್ಬರಕ್ಕೆ ಆರು ಜನ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *