ಮಸ್ಕಿಯಲ್ಲಿ ‘ಕಣ್ಣೇ ಅದಿರಿಂದಿ’ ಸಿಂಗರ್ ಮಂಗ್ಲಿ ಪ್ರಚಾರ – ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ

ರಾಯಚೂರು: ಮಸ್ಕಿ ಉಪ ಚುನಾವಣೆ ಅಖಾಡದಲ್ಲಿ ಮಂಗಳವಾರ ಬಿಜೆಪಿ ಪರವಾಗಿ ಗಾಯಕಿ ಮಂಗ್ಲಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಮಂಗ್ಲಿ ಅವರನ್ನ ಆಹ್ವಾನಿಸಿದ್ದು, ನಾಳೆಯ ಮಸ್ಕಿ ಕೆಲ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತ ಕೇಳಲಿದ್ದಾರೆ. . ಈ ಮಧ್ಯೆ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.

ಇದೇ 17 ರಂದು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಪ್ರಚಾರದ ಕಾವು ಜೋರಾಗಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ರಣತಂತ್ರ ರೂಪಿಸ್ತಿದ್ದಾರೆ. ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನೆಲಸಮ ನಿಶ್ಚಿತ. 3 ಕ್ಷೇತ್ರಗಳಲ್ಲೂ ದೊಡ್ಡ ಅಂತರದಲ್ಲಿ ನಾವೇ ಗೆಲ್ತೀವಿ ಎಂಬ ಭರವಸೆ ವ್ಯಕ್ತಪಡಿಸಿದರು.

ಮಧ್ಯಾಹ್ನ ಪರಿಶಿಷ್ಟ ಪಂಗಡ ಕಾರ್ಯಕರ್ತ ದುರುಗಪ್ಪ ಮನೆಯಲ್ಲಿ ಉಪಹಾರ ಸವಿದ್ರು. ಸಿಎಂ ಊಟಕ್ಕೆ ಬರ್ತಾರೆ ಅಂತ ಹುಗ್ಗಿ ಪಾಯಸ, ಹೋಳಿಗೆ, ಚಪಾತಿ, ಜೋಳದ ರೊಟ್ಟಿ, ಬದನೆಕಾಯಿ ಪಲ್ಯ, ದಾಲ್, ಸಾಂಬಾರ್, ಮೆಟಗಿಕಾಳು, ಮಜ್ಜಿಗೆ, ಹಪ್ಪಳ ಎಣ್ಣೆಗಾಯಿ ರೆಡಿಯಾಗಿತ್ತು.

ಬೆಳಗಾವಿಯಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಿದ್ದರಾಮಯ್ಯಗೆ ದುರಹಂಕಾರ ಅಂದ್ರೆ, ಕಲಬುರಗಿಯಲ್ಲಿ ಸಿ.ಟಿ.ರವಿ ಕಾಂಗ್ರೆಸ್ ಪಕ್ಷವನ್ನ ಖಾಲಿ ಡಬ್ಬ ಅಂದರು. ಸಚಿವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಘಟಾನುಘಟಿ ನಾಯಕರು ಬೆಳಗಾವಿಯಲ್ಲಿ ಮಂಗಳ ಅಂಗಡಿ ಪರ ಪ್ರಚಾರ ಮಾಡಿದರು.

ಇತ್ತ ಕಾಂಗ್ರೆಸ್ ನಾಯಕರು ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಸ್ಕಿಯಲ್ಲಿ ಒಂದೆಡೆ ಸಿಎಂ ಯಡಿಯೂರಪ್ಪ ಪ್ರಚಾರ ಮಾಡಿದ್ರೆ, ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾಂಪೇನೆ ಮಾಡಿದರು. ಬಿಜೆಪಿ ಅಂದ್ರೆ ಭ್ರಷ್ಟಾಚಾರ ಜನತಾ ಪಾರ್ಟಿ ಅಂತ ಸಿದ್ದರಾಮಯ್ಯ ಟೀಕಿಸಿದ್ರು. ಅತ್ತ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಅಭ್ಯರ್ಥಿಯ ಸೀಟು ಮಾರಾಟವಾಗಿದೆ. ಟಿವಿ, ವಾಟ್ಸ್ ಅಪ್ ನೋಡಿದ್ರೆ ವಾಕರಿಕೆ ಬರುತ್ತಿದೆ ಅಂತ ಪರೋಕ್ಷವಾಗಿ ಸಿಡಿ ವಿಚಾರ ಕೆಣಕಿದರು. ಪ್ರಚಾರ ಸಭೆಯಲ್ಲಿ ಸರ್ಕಾರವನ್ನ ಕುಟುಕಿದ ಮಲ್ಲಿಕಾರ್ಜುನ ಖರ್ಗೆ, ಸಿಎಂ ವಿರುದ್ಧ ಅವರ ಸಚಿವರೇ ಗವರ್ನರ್‍ಗೆ ದೂರು ನೀಡಿದ್ದಾರೆ. 3 ಕ್ಷೇತ್ರದಲ್ಲಿ ಗೆದ್ರೆ ಸರ್ಕಾರ ಬಿದ್ದೋಗುತ್ತೆ ಅಂತ ಭವಿಷ್ಯ ನುಡಿದರು.

Comments

Leave a Reply

Your email address will not be published. Required fields are marked *