ಮಳೆ ಹಾನಿ- ಎಸ್‌ಡಿಆರ್‌ಎಫ್‌ ನಿಧಿಯಿಂದ 395 ಕೋಟಿ ರೂ. ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಕೇಂದ್ರ ಸರ್ಕಾರ, ರಾಜ್ಯದ ವಿಪತ್ತು ಪ್ರತಿಕ್ರಿಯೆ ನಿಧಿ(ಎಸ್‌ಡಿಆರ್‌ಎಫ್‌)  ನಿಧಿಯಿಂದ 395.5 ಕೋಟಿ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೆವು. ಇದೀಗ ರಾಜ್ಯದ ಮನವಿಗೆ ಕೂಡಲೇ ಸ್ಪಂದಿಸಿದ ಕೇಂದ್ರ ಸರ್ಕಾರ, ಎಸ್‌ಡಿಆರ್‌ಎಫ್‌ ಫಂಡ್ 395.5 ಕೋಟಿ ಹಣವನ್ನು ಈಗ ಮುಂಗಡವಾಗಿ ಬಿಡುಗಡೆ ಮಾಡಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆ ಕಡಿಮೆ ಆಗಿದ್ದು, ಪ್ರವಾಹ ಕೂಡ ಇಳಿಮುಖ ಆಗ್ತಿದೆ. ಆದರೆ ಮಳೆ ನಿಂತರೂ ಮರದನಿ ನಿಲ್ಲಲ್ಲ ಅನ್ನೋ ಹಾಗೆ ಪ್ರವಾಹದ ಅವಾಂತರಗಳು ಮುಂದುವರಿದಿದೆ. ಕೃಷ್ಣೆಯ ಅಬ್ಬರಕ್ಕೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಮುತ್ತೂರು, ಮೈಗೂರು, ಶೂರ್ಪಾಲಿ, ಮಹೀಶವಾಡಗಿ ಸೇರಿದಂತೆ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಮುತ್ತೂರು ಗ್ರಾಮಸ್ಥರು ಬೋಟ್‍ನಲ್ಲೇ ಜೀವನ ನಡೆಸುವಂತಾಗಿದೆ.

ಘಟಪ್ರಭೆಯ ಅಬ್ಬರಕ್ಕೆ ಮುಧೋಳದ ಮಿರ್ಜಿ ಗ್ರಾಮ ಮುಳುಗಿದ್ದು, ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ರಾಯಚೂರಿನ ಕರಕಲಗಡ್ಡ್ಡಿಯಲ್ಲಿ ಸಿಲುಕಿರೋ ನಾಲ್ವರಿಗೆ ಡ್ರೋನ್ ಮೂಲಕ ಔಷಧಿ, ಆಹಾರ ಪೂರೈಸಲಾಗ್ತಿದೆ. ಮನೆ ಮಠ ಕಳೆದುಕೊಂಡ ಬೆಳಗಾವಿಯ ಮೇಳವಂಕಿ ಗ್ರಾಮದ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಕಣ್ಣೀರು ಹಾಕ್ತಿದ್ದಾರೆ. ಅಥಣಿಯ ಹುಲಿಗಬಾಳ ಗ್ರಾಮ ಜಲಾವೃತವಾಗಿದ್ದು, ಜನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ದಾರದಹಳ್ಳಿ ಸುತ್ತಮುತ್ತ ಭಾರೀ ಮಳೆಯಾಗ್ತಿದೆ. ಕಲಬುರಗಿಯ ಭೀಮಳ್ಳಿ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟುವ ವೇಳೆ ಬೈಕ್‍ನಲ್ಲಿ ಹೋಗ್ಗಿದ್ದ ಇಬ್ಬರಲ್ಲಿ 12 ವರ್ಷದ ಬಾಲಕ ಕೊಚ್ಚಿ ಹೋಗಿದ್ದಾನೆ. ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಎಲ್ಲಾ ಕಡೆ ಅಪಾರ ಬೆಳೆ ಹಾನಿ ಸಂಭವಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌ ನಿಧಿಯಿಂದ 395 ಕೋಟಿ ಹಣ ಬಿಡುಗಡೆ ಮಾಡಿದೆ. ಆದ್ರೆ, ರಾಜ್ಯ ಕೇಳಿದ್ದ 4000 ಕೋಟಿ ವಿಶೇಷ ಪ್ಯಾಕೇಜ್ ಬಗ್ಗೆ ಕೇಂದ್ರ ಮೌನವಹಿಸಿದೆ.

Comments

Leave a Reply

Your email address will not be published. Required fields are marked *