ಮಳೆಯ ಅಬ್ಬರ- ಕಾರು ಜಲಾವೃತ, ಹೆದ್ದಾರಿಗೂ ನುಗ್ಗಿದ ನೀರು

– 25ಕ್ಕೂ ಹೆಚ್ಚು ಮನೆಗಳಿಗೆ ನೀರು

ಯಾದಗಿರಿ: ಜಿಲ್ಲೆಯಲ್ಲಿ ತಡರಾತ್ರಿ ಭಾರೀ ಮಳೆಯಾಗಿದ್ದು, ಪರಿಣಾಮ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ ವೃತ್ತದ ಸಮೀಪವಿರುವ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ತಗ್ಗು ಪ್ರದೇಶಗಳಲ್ಲಿ ಜಾಸ್ತಿ ನೀರು ನುಗ್ಗಿದ ಪರಿಣಾಮ ಎರಡು ಕಾರುಗಳು ಜಲಾವೃತಗೊಂಡಿವೆ. ಕಾರನ್ನು ಹೊರ ತೆಗೆಯಲು ಸಾಧ್ಯವಾಗದೆ ಮಾಲೀಕರು ಪರದಾಟ ಪಡುತ್ತಿದ್ದಾರೆ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೂ ಸಹ ಮಳೆ ನೀರು ನುಗ್ಗಿದ್ದು, ರಸ್ತೆ ಸಹ ಜಲಾವೃತಗೊಂಡಿದೆ. ರಾಜ್ಯ ಹೆದ್ದಾರಿ ಜಲಾವೃತಗೊಂಡ ಪರಿಣಾಮ ವಾಹನಗಳ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.

ರಾತ್ರಿ ಸುರಿದ ಮಳೆ ರೈತಾಪಿ ವರ್ಗದ ಹರ್ಷಕ್ಕೆ ಕಾರಣವಾಗಿದೆ. ಹೊಲ, ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ನಿಂತಿದ್ದು, ಈಗಾಗಲೇ ಬಿತ್ತನೆ ಮಾಡಿದ ರೈತರಿಗೆ ವರದಾನವಾಗಿದೆ. ಜಿಲ್ಲೆಯ ಪ್ರಮುಖ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮುನಿಸಿಕೊಂಡಿದ್ದ ಮಳೆರಾಯ ಇಂದು ಕರಾವಳಿ ಭಾಗಕ್ಕೆ ತಂಪೆರೆದಿದ್ದಾನೆ. ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತಿದ್ದು, ಇನ್ನೂ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಾವಣಗೆರೆಯಲ್ಲೂ ಉತ್ತಮ ಮಳೆಯಾಗುತ್ತಿದೆ. ಜಗಳೂರು ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ರೈತರು ನಿರತರಾಗಿದ್ದಾರೆ. ನಿನ್ನೆ ಸಂಜೆಯಿಂದ ಸುರಿದ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ.

Comments

Leave a Reply

Your email address will not be published. Required fields are marked *