ಮಧ್ಯರಾತ್ರಿ ಪತ್ನಿಯ ಕತ್ತು ಕೊಯ್ದು ಎಸ್ಕೇಪ್- ಅಮ್ಮನ ಶವದ ಜೊತೆ ಮಲಗಿದ್ದ ಮಕ್ಕಳು

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಧ್ಯಾ (26) ಕೊಲೆಯಾದ ವಿವಾಹಿತೆ. ಈ ಘಟನೆ ನಗರದ ಮಾರತಹಳ್ಳಿಯಲ್ಲಿ ನಡೆದಿದ್ದು, ಆರೋಪಿ ಪತಿ ನಾಗೇಶ್ ಸೋಮವಾರ ರಾತ್ರಿ ಪತ್ನಿಯನ್ನು ಕೊಂದು ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೂರು ವರ್ಷದ ಹಿಂದೆ ಮುನ್ನೇಕೊಳಲು ಮೂಲದ ಸಂಧ್ಯಾಳನ್ನು ಆರೋಪಿ ನಾಗೇಶ್ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆರೋಪಿ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸೋಮವಾರ ರಾತ್ರಿ ಸಂಧ್ಯಾ ತನ್ನ ಇಬ್ಬರು ಮಕ್ಕಳ ಜೊತೆ ಮನೆಯಲ್ಲಿ ಮಲಗಿದ್ದಳು. ಈ ವೇಳೆ ನಿದ್ದೆ ಮಾಡುತ್ತಿದ್ದ ಪತ್ನಿಯ ಕತ್ತುನ್ನು ಕೊಯ್ದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ನಂತರ ಆರೋಪಿ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಪರಾರಿಯಾಗಿದ್ದನು. ಇತ್ತ ಮಂಗಳವಾರ ಮುಂಜಾನೆ ಮಕ್ಕಳು ಎದ್ದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಕ್ಕಳು ಅಳುತ್ತಿದ್ದದ್ದನ್ನು ಕೇಳಿ ನೆರೆಹೊರೆಯವರು ಬಂದು ನೋಡಿದ್ದಾರೆ. ಆಗ ಸಂಧ್ಯಾ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದನ್ನು ನೋಡಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಕಳ್ಳತನ ಮಾಡಲು ಬಂದು ಕೊಲೆ ಮಾಡಿರಬಹುದು ಎಂದು ಮನೆಯೊಳಗೆ ಪರಿಶೀಲನೆ ಮಾಡಿದ್ದರು.

ಆಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳು, ಹಣ ಎಲ್ಲ ಇದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಆರೋಪಿ ಪತಿ ಮಧ್ಯರಾತ್ರಿ ಮನೆಯಿಂದ ಪರಾರಿಯಾಗಿದ್ದು ಸೆರೆಯಾಗಿತ್ತು. ತಕ್ಷಣ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *