ಮದ್ವೆಯಾಗುವುದಾಗಿ ನಂಬಿಸಿ ಮೋಸ- ಮನನೊಂದು ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಮಂಡ್ಯ: ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿ ಮೋಸ ಮಾಡಿದ್ದರಿಂದ ಮನನೊಂದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೋರಾಪುರ ಗ್ರಾಮದಲ್ಲಿ ನಡೆದಿದೆ.

ತಾಯಿ ನೇತ್ರಾವತಿ (30), ಮಕ್ಕಳಾದ ಶೋಭಿತಾ (09) ನಂದೀಶ್ (07) ಮೃತ ದುರ್ದೈವಿಗಳಾಗಿದ್ದಾರೆ. ಮೃತ ನೇತ್ರಾವತಿ ಪತಿ ಸೋಮನನ್ನು ಕಳೆದುಕೊಂಡಿದ್ದು, ತನ್ನ ಮಕ್ಕಳ ಜೊತೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದಳು. ಈ ವೇಳೆ ಅದೇ ಗ್ರಾಮದ ಆನಂದ್ ಎಂಬಾತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಈ ನಡುವೆ ಆನಂದ್ ಬೇರೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಈ ಸಂಬಂಧ  ಗ್ರಾಮದಲ್ಲಿ ರಾಜಿ ಪಂಚಾಯಿತಿಯೂ ನಡೆದಿತ್ತು.

ರಾಜಿ ಪಂಚಾಯಿತಿಯಲ್ಲೂ ನ್ಯಾಯ ಸಿಗದಿದ್ದರಿಂದ ಬೇಸತ್ತಿದ್ದ ನೇತ್ರಾವತಿ ತನ್ನ ಮಕ್ಕಳಿಬ್ಬರಿಗೆ ವಿಷ ನೀಡಿ ತಾನೂ ವಿಷ ಸೇವಿಸಿದ್ದಾಳೆ. ವಿಷ ಸೇವಿಸಿದ್ದವರನ್ನು ಗ್ರಾಮಸ್ಥರು ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ನೇತ್ರಾವತಿ, ಮಗಳು ಶೋಭಿತಾ ಸಾವನ್ನಪ್ಪಿದ್ದರು. ಇತ್ತ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗ ನಂದೀಶ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನೆ ಕುರಿತಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *