ಮದ್ಯದಲ್ಲಿ ಕೀಟನಾಶಕ ಬೆರೆಸಿದ ಪತ್ನಿ – ಗಂಡನ ಜೊತೆ ಸ್ನೇಹಿತನೂ ಸಾವು

– ಪ್ರೀತಿಸಿ ಮದ್ವೆಯಾಗಿದ್ದ ಪತಿಯನ್ನೇ ಕೊಂದ್ಳು
– ಮರುದಿನ ಕುಡಿಯಲೆಂದು ಎಣ್ಣೆ ತಂದಿದ್ದ

ಹೈದರಾಬಾದ್: ಮಹಿಳೆಯೊಬ್ಬಳು ಪತಿಯ ಕಿರುಕುಳವನ್ನು ಸಹಿಸಲಾಗದೆ ಅವನು ತಂದಿದ್ದ ಮದ್ಯದಲ್ಲಿ ಕೀಟನಾಶಕವನ್ನು ಬೆರೆಸಿದ್ದಾಳೆ. ಆದರೆ ಪತಿಯ ಜೊತೆ ಆತನ ಗೆಳೆಯನೂ ಮದ್ಯ ಕುಡಿದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಭೀಮವರಂ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಬಾಲರಾಜು ಮತ್ತು ಆತನ ಸ್ನೇಹಿತ ವೆಂಕಟರತ್ನಂ ನಾಯ್ಡು ಎಂದು ಗುರುತಿಸಲಾಗಿದೆ. ಬಾಲರಾಜು ಪತ್ನಿ ಮಲ್ಯಮ್ಮ ಮದ್ಯದಲ್ಲಿ ಕೀಟನಾಶಕ ಬೆರೆಸಿ ಪತಿಯನ್ನು ಕೊಲೆ ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮೃತ ಜೆ.ಬಾಲರಾಜು ಹತ್ತು ವರ್ಷಗಳ ಹಿಂದೆ ಮಲ್ಯಮ್ಮಳನ್ನು ಪ್ರೀತಿಸಿ ಮದುವೆಯಾಗಿದ್ದನು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದ ಕೆಲ ವರ್ಷಗಳ ಕಾಲ ಮೃತ ಬಾಲರಾಜು ಪತ್ನಿಯನ್ನು ಚೆನ್ನಾಗಿ ನೋಡಿಕೊಂಡಿದ್ದನು. ಆದರೆ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕುಡಿತದ ದಾಸನಾಗಿದ್ದ ಮೃತ ಬಾಲರಾಜು ತನ್ನ ಹೆಂಡತಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಡಲು ಪ್ರಾರಂಭಿಸಿದ್ದನು.

ಇತ್ತೀಚಿಗೆ ಬಾಲರಾಜು ಹೆಚ್ಚಾಗಿ ಮಲ್ಯಮ್ಮಳನ್ನು ಹಿಂಸಿಸುತ್ತಿದ್ದನು. ಕೊನೆಗೆ ಪತಿಯ ಕಿರುಕುಳವನ್ನು ಸಹಿಸಲಾಗದೆ ಮಲ್ಯಮ್ಮ ತನ್ನ ಗಂಡನನ್ನು ಕೊಲ್ಲಲು ನಿರ್ಧರಿಸಿದ್ದಳು. ಅದರಂತೆಯೇ ಸೆ.23 ರಂದು ಬಾಲರಾಜು ಅತಿಯಾಗಿ ಕುಡಿದು ಮನೆಗೆ ಬಂದಿದ್ದನು. ಜೊತೆಗೆ ಮರುದಿನ ಕುಡಿಯಲು ಮದ್ಯದ ಬಾಟಲ್ ತೆಗೆದುಕೊಂಡು ಮನೆಗೆ ಬಂದಿದ್ದನು. ಆರೋಪಿ ಮಲ್ಯಮ್ಮ ಪ್ಲಾನ್ ಮಾಡಿ ಅದೇ ಮದ್ಯಕ್ಕೆ ಕೀಟನಾಶಕ ಬೆರೆಸಿದ್ದಳು.

ಮರುದಿನ ಬಾಲರಾಜು ಮನೆಯಲ್ಲಿಯೇ ಕುಳಿತಿಕೊಂಡು ಮದ್ಯಪಾನ ಮಾಡುತ್ತಿದ್ದನು. ಈ ವೇಳೆ ಆತನ ಗೆಳೆಯ ವೆಂಕಟರತ್ನಂ ನಾಯ್ಡು ಮನೆಗೆ ಬಂದಿದ್ದನು. ಆಗ ಕೀಟನಾಶಕ ಬೆರೆಸಿರುವುದು ಗೊತ್ತಿಲ್ಲದೆ ಇಬ್ಬರು ಮದ್ಯವನ್ನು ಕುಡಿದಿದ್ದಾರೆ. ಮದ್ಯಪಾನ ಮಾಡಿದ ನಂತರ ಇಬ್ಬರೂ ಅಸ್ವಸ್ಥರಾಗಿದ್ದಾರೆ. ನಂತರ ಆಕೆಯೇ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ ಮದ್ಯ ಕುಡಿದು ಮೃತಪಟ್ಟಿದ್ದಾರೆ ಎಂದು ಆರೋಪಿ ಮಲ್ಯಮ್ಮ ಪೊಲೀಸರ ಮುಂದೆ ಸುಳ್ಳು ಹೇಳಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೀಟನಾಶಕದಿಂದ ಸಾವನ್ನಪ್ಪಿರುವುದು ಬಹಿರಂಗವಾಗಿದೆ. ಕೂಡಲೇ ಆಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ. ಆಗ ಪತಿ ತುಂಬಾ ಹಿಂಸೆ ನೀಡುತ್ತಿದ್ದನು. ಜೊತೆಗೆ ನನ್ನ ಮಕ್ಕಳ ಭವಿಷ್ಯಕ್ಕಾಗಿ ಆತನನ್ನು ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

Comments

Leave a Reply

Your email address will not be published. Required fields are marked *