ಮದುವೆ ಕಾರ್ಡ್ ಕೊಡಲು ಹೋಗಿ ಕೊರೊನಾ ಹೊತ್ತು ತಂದ್ರು

– ಗಣಿಜಿಲ್ಲೆಯಲಿ ಮತ್ತೆ ಮೂರು ಪಾಸಿಟಿವ್ ಕೇಸ್

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ದೆಹಲಿ ಮತ್ತು ಮುಂಬೈನಿಂದ ಬಂದ ಮೂರು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ನಗರದ ಡೆಂಟಲ್ ಕಾಲೇಜು, ಜಿಲ್ಲೆಯ ಹೊಸಪೇಟೆ ಜಂಭುನಾಥಗುಡ್ಡದ ವಸತಿ ನಿಲಯ ಮತ್ತು ಬಳ್ಳಾರಿಯ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಈ ಮೂವರ ಗಂಟಲು ದ್ರವವನ್ನು ಮೇ 22 ರಂದು ಸಂಗ್ರಹಿಸಲಾಗಿತ್ತು. ಭಾನುವಾರ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ಸೋಂಕು ಇರೋದು ಖಾತ್ರಿಯಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲ ಗಳು ತಿಳಿಸಿವೆ.

ಮಗಳ ಮದುವೆ ಹಿನ್ನಲೆಯಲ್ಲಿ ಮುಂಬೈನಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೆ ಮದುವೆ ಕಾರ್ಡ್ ಹಂಚಲು ಹೋಗಿದ್ದ 40 ವರ್ಷದ ಮಹಿಳೆ ಹಾಗೂ 48 ವರ್ಷದ ಪುರುಷ ಮತ್ತು ಈ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹೊಸಪೇಟೆ ವ್ಯಕ್ತಿಯೊಂದಿಗೆ ದೆಹಲಿಗೆ ತೆರಳಿದ್ದ 23 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಡಿಹೆಚ್ ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ವರೆಗೆ 33 ಪಾಸಿಟಿವ್ ಕೇಸ್ ಗಳಿದ್ದವು. ಇದೀಗ ಅದರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಈ ವರೆಗೆ 15 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಐಶೋಲೇಷನ್ ನಲ್ಲಿರುವವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

Comments

Leave a Reply

Your email address will not be published. Required fields are marked *