ಗೆಳತಿಯ ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಂದೇ ಬಿಟ್ಟ

ಹುಬ್ಬಳ್ಳಿ: ಪತ್ನಿ ಹಾಗೂ ಮಗುವನ್ನು ನೋಡಲು ಬಂದು ಬೀದಿ ಹೆಣವಾಗಿದ್ದ ವ್ಯಕ್ತಿಯ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ನಡೆದ 24 ಗಂಟೆಗಳಲ್ಲಿ ಆರೋಪಿಯ ಬಂಧಿಸುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಜಗದೀಶ್ ಕೊಲ್ಲಾಪುರ ಕೊಲೆಯಾದ ವ್ಯಕ್ತಿ. ಕೊಲೆಯಾದ ಜಗದೀಶ್‍ನ ಹೆಂಡತಿಯ ಪ್ರಿಯಕರನೇ ಆರೋಪಿ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರು, ಆರೋಪಿತನಾದ ಅದರಗುಂಚಿ ಗ್ರಾಮದ ಕಾಶಪ್ಪ ನಿಂಗಪ್ಪ ತಿಪ್ಪಣ್ಣನವರ ಬಂಧಿಸಿ ಪ್ರಕರಣವನ್ನು ಬೇಧಿಸಿದ್ದಾರೆ.

ಜಗದೀಶ್ ಶವ ನಿನ್ನೆ ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಬಳಿಯ ಚೆನ್ನಾಪುರ ರಸ್ತೆಯಲ್ಲಿ ಸಿಕ್ಕಿತ್ತು. ಆತನ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಬೆನ್ನತ್ತಿದ ಪೊಲೀಸರಿಗೆ ಕೊಲೆಗೆ ಕಾರಣ ಜಗದೀಶ್‍ನ ಹೆಂಡತಿಯ ಅಕ್ರಮ ಸಂಬಂಧ ಎಂದು ತಿಳಿದು ಬಂದಿತ್ತು. ಜಗದೀಶ್‍ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾಶಪ್ಪ ಆತನನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಜಗದೀಶ್ ತವರಿನಲ್ಲಿದ್ದ ಪತ್ನಿ ಹಾಗೂ ಮಗುವನ್ನು ನೋಡಲು ಹುಬ್ಬಳ್ಳಿಗೆ ಬಂದಿದ್ದ. ಈ ವೇಳೆ ಅವನನ್ನು ಭೇಟಿ ಮಾಡಿದ ಕಾಶಪ್ಪ ಜಗದೀಶ್‍ನನ್ನು ಕರೆದುಕೊಂಡು ಊರ ಹೊರಗೆ ಪಾರ್ಟಿ ಮಾಡಿದ್ದಾನೆ. ಆತನಿಗೆ ಕಂಠ ಪೂರ್ತಿ ಮದ್ಯ ಕೂಡಿಸಿ, ಕುಡಿದ ನಶೆಯಲ್ಲಿದ್ದ ಜಗದೀಶ್‍ನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಗೋಕಾಕ್, ಪಿಎಸ್‍ಐಗಳಾದ ಮಂಜುಳಾ ಮತ್ತು ಚಾಮುಂಡೇಶ್ವರಿ, ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಮಂಜು ಹೆಳವರ, ಮಂಜು ಅಮ್ಮಿನಬಾಯಿ, ಅರ್ಜುನ ಟಕಾಯಿ, ಮಂಜು ವಾಲಿಕಾರ ಮತ್ತು ಚಂದ್ರು ಜನಗಣ್ಣನವರ ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *