ಚಿರು ಮತ್ತೆ ಹುಟ್ಟಿ ಬರ್ತಾನೆಂದು ಅಂದೇ ಹೇಳಿದ್ದೆ, ಆ ಮಾತು ನಿಜವಾಗಿದೆ: ತಾರಾ

ಬೆಂಗಳೂರು: ಮೇಘನಾ ರಾಜ್ ಸರ್ಜಾಗೆ ಗಂಡು ಮಗು ಜನಿಸಿರುವುದು ಇಡೀ ಸ್ಯಾಂಡಲ್‍ವುಡ್‍ನಲ್ಲಿ ಸಂತಸವನ್ನುಂಟು ಮಾಡಿದ್ದು, ಈ ಕುರಿತು ನಟಿ ತಾರಾ ಅನುರಾಧಾ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಿರು ಮತ್ತೆ ಹುಟ್ಟಿಬರ್ತಾನೆ ಎಂದು ಚಿರು ಸಾವಿನ ದಿನವೇ ನಾನು ಹೇಳಿದ್ದೆ. ಇವತ್ತು ಆ ಮಾತು ನಿಜವಾಗಿದೆ. ಚಿರು ಇದ್ದಿದ್ದರೆ ಅವನ ಖುಷಿಯನ್ನು ಹೇಳೋದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಆ ಮಟ್ಟಿಗೆ ಸಂತಸ ಪಡುತ್ತಿದ್ದ ಎಂದರು.

ಮೇಘನಾ ಧೈರ್ಯವಂತೆ, ಚಿರು ಇಲ್ಲದ ದಿನಗಳು ಆಕೆಗೆ ಅದೆಷ್ಟು ಕಷ್ಟವಾಗಿತ್ತು ಎನ್ನುವುದನ್ನು ಹೇಳಲು ಸಾಧ್ಯವೇ ಇಲ್ಲ. ಈಗ ಮತ್ತೆ ಚಿರು ಬಂದಿದ್ದಾನೆ, ಮತ್ತೆ ಅವರ ಕುಟುಂಬದಲ್ಲಿ ನಗು ಬಂದಿದೆ. ನನಗೂ ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.

ಚಿರು ಸ್ನೇಹಿತ ಪನ್ನಗಾಭರಣ ಮಾತನಾಡಿ, ಚಿರು ಮತ್ತೆ ಹುಟ್ಟಿ ಬರುತ್ತಾನೆ ಎಂಬ ನಿರೀಕ್ಷೆ ಇತ್ತು. ವಿಶೇಷ ಎಂದರೆ ಚಿರಂಜೀವಿ ಹಾಗೂ ಮೇಘನಾ ನಿಶ್ಚಿತಾರ್ಥದ ದಿನವೇ ಮಗು ಹುಟ್ಟಿರುವುದು ತುಂಬಾನೇ ಸಂತೋಷ ಆಯಿತು. ಚಿರು ಮತ್ತೆ ನಮಗೆಲ್ಲ ಸಿಕ್ಕ ಎಂದು ಖುಷಿಯಾಯಿತು. ಈ ತಿಂಗಳಲ್ಲೇ ಚಿರು ಸಹ ಹುಟ್ಟಿದ್ದು, ಅವನು ಅಂದುಕೊಂಡತೆಯೇ ಎಲ್ಲ ನೆರವೇರಿದೆ. ಮಗು ಮೇಲೆ ಅವನು ಏನೆಲ್ಲ ಕನಸು ಇಟ್ಟುಕೊಂಡಿದ್ದ ಅದನ್ನೆಲ್ಲ ನಾವು ಈಡೇರಿಸುತ್ತೇವೆ ಎಂದು ಖುಷಿಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *