ಮತ್ತೆ ಕರೆದ್ರೆ ವಿಚಾರಣೆಗೆ ಬರ್ತೀನಿ: ದಿಗಂತ್

ಬೆಂಗಳೂರು: ಮೂರು ಗಂಟೆಯ ಸಿಸಿಬಿ ವಿಚಾರಣೆ ಎದುರಿಸಿದ ಬಳಿಕ ನಟ ದಿಗಂತ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ದಿಗಂತ್ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದರು.

ಸಿಸಿಬಿ ಕಚೇರಿಯಿಂದ ಹೊರ ಬಂದ ದಿಗಂತ್, ಪ್ರಕರಣ ತನಿಖಾ ಹಂತದಲ್ಲಿದೆ. ಇಂದು ಕರೆದಿದ್ದಕ್ಕೆ ಬಂದಿದ್ದೇನೆ. ಮತ್ತೆ ಕರೆದ್ರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು. ಇಂದು ಮಾರಿಗೋಲ್ಡ್ ಸಿನಿಮಾ ಚಿತ್ರೀಕರಣದಿಂದ ದಿಗಂತ್ ನೇರವಾಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ದಿಗಂತ್ ಅವರಿಗೆ ಸಿಸಿಬಿ ನೋಟಿಸ್ ನೀಡಿತ್ತು.

ಬೆಂಗಳೂರಿನ ಹೆಚ್‍ಎಂಟಿ ಬಳಿ ಮಾರಿಗೋಲ್ಡ್ ಸಿನಿಮಾದ ಚಿತ್ರೀಕರಣದಲ್ಲಿ ದಿಗಂತ್ ಭಾಗಿಯಾಗಿದ್ದರು. ನೋಟಿಸ್ ಹಿನ್ನೆಲೆ ದಿಗಂತ್ ಚಿತ್ರತಂಡಕ್ಕೆ ಮಾಹಿತಿ ನೀಡಿ ವಿಚಾರಣೆಗೆ ಹಾಜರಾಗಿದ್ದರು. ಮಂಗಳವಾರ ಸಾಹಸ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಇಂದು ಬೆಳಗ್ಗೆ ಎಮೋಷನಲ್ ದೃಶ್ಯಗಳನ್ನ ಶೂಟ್ ಮಾಡಲಾಗಿತ್ತು ಎಂದು ಚಿತ್ರತಂಡ ಹೇಳಿದೆ.

ಈ ಹಿಂದೆ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಿ ಕಳುಹಿಸಿತ್ತು. ಇಬ್ಬರ ಮೊಬೈಲ್ ನ್ನು ಕೂಡ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಸಿಸಿಬಿ, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಹೇಳಿತ್ತು. ಅಂತೆಯೇ ದಂಪತಿ ಕೂಡ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮತ್ತೆ ಸಿಸಿಬಿ ಅಧಿಕಾರಿಗಳು ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.

ಮೊಬೈಲ್ ಪಾಸ್ ವರ್ಡ್ ಪಡೆದುಕೊಂಡಿದ್ದ ಸಿಸಿಬಿಗೆ ದಿಗಂತ್ ಮೊಬೈಲ್ ನಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ದಿಗಂತ್ ಹೇಳಿಕೆ ಆಧಾರದ ಮೇಲೆ ಕೆಲ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ದಿಗಂತ್ ವಿರುದ್ಧ ಕೆಲ ಮಾಹಿತಿ ಮತ್ತು ಸಾಕ್ಷಿಗಳು ಸಿಕ್ಕ ಮಾಹಿತಿ ಲಭ್ಯವಾಗಿದೆ. ಮೊಬೈಲ್ ನಲ್ಲಿ ನಡೆಸಿದ್ದ ಚಾಟಿಂಗ್ ರಿಟ್ರೀವ್ ಮಾಡಲಾಗಿದೆ. ಈ ಕುರಿತು ವಿಚಾರಣೆಗೆ ಬುಲಾವ್ ನೀಡಿತ್ತು ಎನ್ನಲಾಗಿದೆ.

Comments

Leave a Reply

Your email address will not be published. Required fields are marked *