ಮಗಳ ಆರೋಗ್ಯ ವಿಚಾರಿಸಿ ಹಿಂದಿರುಗ್ತಿದ್ದಾಗ ನದಿ ನೀರಲ್ಲಿ ಕೊಚ್ಚಿ ಹೋದ ಬೈಕ್

– ಗ್ರಾಮಸ್ಥರಿಂದ ವ್ಯಕ್ತಿಯ ರಕ್ಷಣೆ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ನದಿಯಲ್ಲಿ (ವೇದಾವತಿ ನದಿ) ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ನೆರೆಯ ಆಂಧ್ರಪ್ರದೇಶದ ಅದೋನಿ ನಗರದ ದೇವೇಂದ್ರ ಎಂಬಾತ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ದೇವೇಂದ್ರ ಮತ್ತು ಆತನ ಪತ್ನಿ ಹನುಮಂತಮ್ಮ ಅವರೊಂದಿಗೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿರುಗುಪ್ಪ ನಗರದಲ್ಲಿ ನೆಲೆಸಿರುವ ತನ್ನ ಮಗಳ ಆರೋಗ್ಯ ಸ್ಥಿತಿ ವಿಚಾರಿಸಿ ವಾಪಾಸ್ ಆಗುತ್ತಿದ್ದರು. ಹೀಗೆ ಆದೋನಿಗೆ ಬೈಕಿನಲ್ಲಿ ವಾಪಸ್ಸಾಗ್ತಿದ್ದಾಗ ರಾರಾವಿ ನದಿ ನೀರಿನ ರಭಸಕ್ಕೆ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಾ ದೇವೇಂದ್ರ ಪ್ರಾಣಾಪಾಯಕ್ಕೆ ಸಿಲುಕಿದ್ದಾನೆ.

ಈ ಪ್ರಾಣಾಪಾಯಕ್ಕೆ ಸಿಲುಕಿದ್ದ ಆತನು ನದಿಯಲ್ಲಿ ಕೊಚ್ಚಿ ಹೋಗುತ್ತಿರುವಾಗ ಈಜಾಡುತ್ತಾ ಆಸರೆಗಾಗಿ ಬಳ್ಳಾರಿ ಜಾಲಿ ಬೇಲಿಯನ್ನ ಹಿಡಿದುಕೊಂಡು ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾನೆ. ಸ್ಥಳೀಯ ಗ್ರಾಮಸ್ಥರು ಆತನನ್ನ ರಕ್ಷಣೆ ಮಾಡಿದ್ದಾರೆ. ಈ ಮೂಲಕ ದೇವೇಂದ್ರ ಪ್ರಾಣಪಾಯದಿಂದ ಪಾರಾಗಿದ್ದು ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

Comments

Leave a Reply

Your email address will not be published. Required fields are marked *