ಮಗನ ಕೈ ಕಟ್ಟಿ ನದಿಯಲ್ಲಿ ಮುಳುಗಿಸಿ ಕೊಂದ- ಮನೆಗೆ ಬಂದು ಕೊಲೆ ವಿಚಾರ ಹೇಳಿದ

– ಮಗಳ ಹುಟ್ಟುಹಬ್ಬ ಕೇಕ್ ತರಲು ಹೋದಾಗ ಕೃತ್ಯ
– ನನ್ನ ವಂಶವನ್ನ ಮುಗಿಸಿದ್ದೇನೆಂದು ಪೊಲೀಸರಿಗೆ ಶರಣು

ಭೋಪಾಲ್: ತಂದೆಯೊಬ್ಬ ಎಂಟು ವರ್ಷದ ಮಗನನ್ನು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್‍ನಲ್ಲಿ ನಡೆದಿದೆ.

ಬಾಲಘಾಟ್‍ನ ವೈಂಗಂಗಾ ನದಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಸರಸ್ವತಿ ನಗರ ಪ್ರದೇಶದ ನಿವಾಸಿ ಸುನಿಲ್ ಜೈಸ್ವಾಲ್ (37) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದು, ಕೊರೊನಾ ಲಾಕ್‍ಡೌನ್‍ನಿಂದಾಗಿ ನಿರುದ್ಯೋಗಿಯಾಗಿದ್ದೇನೆ. ಇದರಿಂದ ಕುಟುಂಬವನ್ನು ಪೋಷಿಸಲು ಹಣವಿಲ್ಲ ಎಂದು ತಿಳಿಸಿರುವುದಾಗಿ ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.

ಆರೋಪಿ ತಂದೆ ಮೊದಲಿಗೆ ತನ್ನ ಮಗನ ಕೈಗಳನ್ನು ಕಟ್ಟಿ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಜೈಸ್ವಾಲ್ ತನ್ನ ಮನೆಗೆ ಹೋಗಿ ಮಗನನ್ನು ಕೊಲೆ ಮಾಡಿರುವ ವಿಚಾರವನ್ನು ತಿಳಿಸಿದ್ದಾನೆ. ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಮಾಹಿತಿ ತುಳಿದು ಪೊಲೀಸರು ನದಿಯಲ್ಲಿ ಹುಡುಕಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಠಾಣೆ ಉಸ್ತುವಾರಿ ವಿಜಯ್ ಸಿಂಗ್ ತಿಳಿಸಿದರು.

ವಿಚಾರಣೆ ವೇಳೆ ಆರೋಪಿ, ಲಾಕ್‍ಡೌನ್ ಕಾರಣದಿಂದಾಗಿ ನಾನು ನಿರುದ್ಯೋಗಿಯಾಗಿದ್ದೇನೆ. ಹೀಗಾಗಿ ನನ್ನ ಕುಟುಂಬವನ್ನು ಪೋಷಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತನ್ನ ಮಗನನ್ನು ಕೊಂದಿದ್ದೇನೆ. ಮಗನನ್ನು ಕೊಲ್ಲುವ ಮೂಲಕ ನನ್ನ ವಂಶವನ್ನು ಮುಗಿಸಿದ್ದೇನೆ ಎಂದು ಆರೋಪಿ ಹೇಳಿದ್ದಾನೆ.

ಆರೋಪಿಯ 10 ವರ್ಷದ ಮಗಳ ಜನ್ಮದಿನ ಶುಕ್ರವಾರ ಇತ್ತು. ಅಂದು ತನ್ನ ಮಗನೊಂದಿಗೆ ಕೇಕ್ ತರಲು ಹೋಗಿದ್ದಾಗ ಈ ಕೃತ್ಯ ಎಸಗಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿ ಜೈಸ್ವಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *