ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಮಾತಾಡಿದ್ರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ: ಸೋಮಶೇಖರ್

ಮೈಸೂರು: ಮಾಧ್ಯಮದವರ ಮಾತು ಕೇಳಿ ಮಂತ್ರಿಮಂಡಲ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರೆ ನನ್ನ ಮಂತ್ರಿ ಸ್ಥಾನವೂ ಹೋಗುತ್ತೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡೋಕೆ ನನಗೆ ಅಧಿಕಾರ ಇಲ್ಲ. ಮಾಧ್ಯಮದವರು ಅಧಿಕಾರ ಕೊಡಿಸಿದರೆ ಮಾತನಾಡಬಹುದು. ನನಗೆ ಎಷ್ಟು ಅಧಿಕಾರ ಇದೆ ಅಷ್ಟಕ್ಕೆ ಮಾತ್ರ ಉತ್ತರಿಸುತ್ತೇನೆ. ಪದೇ ಪದೆ ಮಂತ್ರಿಮಂಡಲ ವಿಸ್ತರಣೆಯ ಪ್ರಶ್ನೆ ಕೇಳಿಬೇಡಿ. ಅದಕ್ಕೆ ನಾನು ಉತ್ತರ ಕೊಟ್ಟರೆ ಇರೋ ಮಂತ್ರಿ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಗೆಲ್ಲುತ್ತಾರೆ. ಮುಂಚೆ ಒಂದು ಜಮಾನ ಇತ್ತು. ಕಡಿಮೆ ಮತದಾನವಾದರೆ ಇನ್ನೊಂದು ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೊರೊನಾ ನಡುವೆ ಆರ್‍ಆರ್ ನಗರದಲ್ಲಿ ಉತ್ತಮ ಮತ ಚಲಾವಣೆ ಆಗಿದೆ. ವಿದ್ಯಾವಂತರು ಬಂದು ಮತ ಹಾಕಿದ್ದಾರೆ. ಹೀಗಾಗಿ ನಮ್ಮ ಅಭ್ಯರ್ಥಿ ಆರ್‍ಆರ್ ನಗರ ಕ್ಷೇತ್ರದಲ್ಲಿ ಗೆಲ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಶಿರಾ ಉಪ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಸೋಲು ಒಪ್ಪಿಕೊಂಡಿದ್ದಾರೆ. ಇವಿಎಂ ಮೇಲೆ ಅವರು ಮಾಡಿರೋ ಆರೋಪ ಸೋಲು ಮತ್ತು ಹತಾಶೆಯ ಸಂಕೇತ. ಫಲಿತಾಂಶ ಬಂದ ಮೇಲೆ ಕಾರಣ ಕೊಡುವುದಕ್ಕಿಂತ, ಟಿ.ಬಿ.ಜಯಚಂದ್ರ ಮುಂಚೆಯೇ ಕಾರಣ ಹುಡುಕಿಕೊಂಡಿದ್ದಾರೆ ಎಂದು ಹರಿಹಾಯ್ದರು.

Comments

Leave a Reply

Your email address will not be published. Required fields are marked *