ಮಂಡ್ಯ ಡಿಸಿಸಿ ಬ್ಯಾಂಕಲ್ಲಿ ತೆನೆ-ಕಮಲ ದೋಸ್ತಿ ಆಗುತ್ತಾ?

– ‘ಕೈ’ಗೆ ತಿರುಗೇಟು ನೀಡಲು ‘ದಳ’ ಪ್ಲಾನ್

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಮಂಗಳವಾರ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ವಿರುದ್ಧ ಕಳೆದ ಲೋಕಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಮುಂದಾಗಿದೆ.

ಒಟ್ಟು 12 ಸದಸ್ಯ ಬಲದ ಡಿಸಿಸಿ ಬ್ಯಾಂಕ್‍ನಲ್ಲಿ 8 ಮಂದಿ ಕಾಂಗ್ರೆಸ್ ಸದಸ್ಯರು, ನಾಲ್ವರು ಜೆಡಿಎಸ್ ಸದಸ್ಯರಿದ್ದಾರೆ. ಆದರೆ ಬಿಜೆಪಿ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್ ರಣತಂತ್ರ ರೂಪಿಸಿದೆ ಎನ್ನಲಾಗಿದೆ. ಸರ್ಕಾರದಿಂದ ನಾಮನಿರ್ದೇಶನಗೊಂಡ ಓರ್ವ ಸದಸ್ಯ ಮತ್ತು ಇಬ್ಬರು ಅಧಿಕಾರಿಗಳು ಮತ ಚಲಾಯಿಸಲು ಅವಕಾಶ ಇದೆ. ಈ ಮೂರು ಮತ ಮತ್ತು ಕಾಂಗ್ರೆಸ್‍ನ ಒಬ್ಬರ ಮತ ಸಿಕ್ಕಲ್ಲಿ ಜೆಡಿಎಸ್ ಗೆಲ್ಲಲು ಅವಕಾಶ ಇದೆ. ಹೀಗಾಗಿಯೇ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಂ ಬಿಎಸ್‍ವೈ ಭೇಟಿ ಮಾಡಿ ಬೆಂಬಲ ಕೇಳಿದ್ದರು ಎಂದು ಹೇಳಲಾಗುತ್ತಿದೆ.

ಬಿಜೆಪಿ ಬೆಂಬಲ ಸಿಗೋ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಓರ್ವ ಸದಸ್ಯನನ್ನು ಸೆಳೆದು ರೆಸಾರ್ಟ್ ಗೆ ಜೆಡಿಎಸ್ ಶಿಫ್ಟ್ ಮಾಡಿದೆ. ಕುಮಾರಸ್ವಾಮಿ ಲೆಕ್ಕಾಚಾರ ನಿಜವಾದಲ್ಲಿ ಜೆಡಿಎಸ್ ಸುಲಭವಾಗಿ ಮಂಡ್ಯ ಡಿಸಿಸಿ ಗದ್ದುಗೆ ಏರಲಿದೆ. ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬೆಂಬಲ ನೀಡಬಾರದುಇ ಅಂತಾ ಸಚಿವ ನಾರಾಯಣಗೌಡ ಮತ್ತು ಸಂಸದೆ ಸುಮಲತಾ ಸಿಎಂ ಭೇಟಿ ಮಾಡಿ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಜೆಡಿಎಸ್ ಮೈತ್ರಿ ಆಗುತ್ತೋ ಬಿಡುತ್ತೋ? ಅದ್ರ ಬಗ್ಗೆ ನಾನು ಮಾತನಾಡಲ್ಲ ಅಂದ್ರು. ಇದರ ಹಿಂದೆ ಏನೇನು ನಡೀತಿದೆ ಅನ್ನೋದು ಗೊತ್ತಿದೆ. ಮುಖ್ಯಮಂತ್ರಿಗಳು ಎಲ್ಲವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *