ಮಂಡ್ಯದ ಪೋಸ್ಟ್ ಆಫೀಸ್‍ನಲ್ಲಿ ದೋಖಾ – ಸಾವನ್ನಪ್ಪಿ 5 ವರ್ಷ ನಂತ್ರ ಖಾತೆಯಿಂದ ಹಣ ಡ್ರಾ

ಮಂಡ್ಯ: ವೃದ್ಧೆಯೊಬ್ಬರು ಮೃತಪಟ್ಟು ಐದು ವರ್ಷವಾದ ಬಳಿಕ ಅವರ ಅಂಚೆ ಕಚೇರಿಯಲ್ಲಿ ಇದ್ದ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಅಂಚೆ ಅಧಿಕಾರಿಗಳನ್ನು ಕೇಳಿದರೆ ಉತ್ತರವಿಲ್ಲದೆ ಸೈಲೆಂಟ್ ಆಗಿ ಇದ್ದಾರೆ.

ಕೆರಗೋಡು ಗ್ರಾಮದ ನಿವಾಸಿ ವಿಜಯಾಂಭ ಎಂಬವರು 2011 ಜೂನ್ 18 ರಂದು ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ವಿಜಯಾಂಭ ಅವರು ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದಾರೆ ಎಂದು 2018ರಲ್ಲಿ ಮನೆಯನ್ನು ಸ್ವಚ್ಚಗೊಳಿಸುವ ವೇಳೆ ಸಿಕ್ಕ ಪಾಸ್‍ಬುಕ್‍ನಿಂದ ತಿಳಿದು ಬಂದಿದೆ. ನಂತರ ಆ ಪಾಸ್‍ಬುಕ್ ಹಾಗೂ ವಿಜಯಾಂಭ ಅವರ ಡೆತ್ ಸರ್ಟಿಫಿಕೇಟ್‍ನ್ನು ತೆಗೆದುಕೊಂಡು ಅಂಚೆ ಕಚೇರಿಗೆ ಹೋಗಿ ಅಂಚೆ ಅಕೌಂಟ್ ಬಗ್ಗೆ ಕುಟುಂಬಸ್ಥರು ಪರಿಶೀಲನೆ ಮಾಡಿದ್ದಾರೆ.

ಈ ವೇಳೆ 2016ರ ಜೂನ್ 28 ರಂದು ವಿಜಯಾಂಭ ಖಾತೆಯಿಂದ 19 ಸಾವಿರ ಹಣ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಅದಾಗಲೇ ವಿಜಯಾಂಭ ಅವರು ಮೃತಪಟ್ಟಿ 5 ವರ್ಷಗಳು ಆಗಿತ್ತು. ಈ ವೇಳೆ ಕುಟುಂಬಸ್ಥರು ವಿಜಯಾಂಭ ಅವರು ಸಾವನ್ನಪ್ಪಿರುವುದು 2011 ರಲ್ಲಿ ಅವರ ಖಾತೆಯಿಂದ 2015 ರಲ್ಲಿ ಹಣ ಹೇಗೆ ಡ್ರಾ ಆಯ್ತು ಎಂದು ಪ್ರಶ್ನೆ ಮಾಡಿದ್ದಾರೆ.

ಕುಟುಂಬಸ್ಥರ ಪ್ರಶ್ನೆಗೆ ಅಂಚೆ ಅಧಿಕಾರಿಗಳು ಯಾವುದೇ ಉತ್ತರ ನೀಡದೇ ಬೇರೆ ಸಬೂಬನ್ನು ನೀಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದು ಮೂರು ವರ್ಷಗಳಾಗಿದ್ದು, ಇಲ್ಲಿಯವರೆಗೆ ಯಾವುದೇ ನ್ಯಾಯ ಈ ಕುಟುಂಬಕ್ಕೆ ದೊರೆತಿಲ್ಲ. ವಿಜಯಾಂಭ ಅವರ ಅಳಿಯ ಶಿವಪ್ರಕಾಶ್ ಅಂಚೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದರೂ ಸಮಸ್ಯೆ ಪರಿಹಾರವಾಗಿಲ್ಲ. ಅಂಚೆ ಇಲಾಖೆಯಲ್ಲಿ ಈ ರೀತಿಯ ಮೋಸ ಆಗುತ್ತದೆ ಎಂದರೆ ಯಾರು ಹಣ ಕಟ್ಟುತ್ತಾರೆ. ಈ ರೀತಿ ಆದೆಷ್ಟು ಜನರಿಗೆ ಮೋಸ ಆಗಿದೆಯೋ. ನಮಗೆ ನ್ಯಾಯ ದೊರಕಿಸಿ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷಯಾಗಬೇಕೆಂದು ಶಿವಪ್ರಕಾಶ್ ಆಗ್ರಹ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *