ಭೀಕರ ಅಪಘಾತ- 10 ಸಾವು, 25 ಜನರಿಗೆ ಗಂಭೀರ ಗಾಯ

– ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
– ದಟ್ಟ ಮಂಜು ಆವರಿಸಿದ್ದರಿಂದ ಅವಘಡ

ನವದೆಹಲಿ: ಲಾರಿ ಹಾಗೂ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದಿದ್ದು, 10 ಜನ ಸಾವನ್ನಪ್ಪಿದ್ದಾರೆ. ಸುಮಾರು 25 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಹಾಗೂ ಗಾಯಗೊಂಡವರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಹಾರ ಘೋಷಿಸಿದ್ದಾರೆ.

ಆಗ್ರಾ ಹಾಗೂ ಮೊರಾದಾಬಾದ್ ಹೈ ವೇಯಲ್ಲಿ ಬೆಳಗಿನಜಾವ ಘಟನೆ ಸಂಭವಿಸಿದ್ದು, ದಟ್ಟ ಮಂಜು ಆವರಿಸಿದ್ದರಿಂದ ದಾರಿ ಕಾಣದೆ ಅವಘಡ ಸಂಭವಿಸಿದೆ. ಬಸ್, ಟ್ರಕ್ ಹಾಗೂ ಮತ್ತೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಅಂತ್ಯವಾಗಿದ್ದು, ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಓವರ್ ಟೇಕ್ ಮಾಡುವಾಗ ಅವಘಡ ಸಂಭವಿಸಿರುವ ಕುರಿತು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿರುವುದಾಗಿ ಮೊರಾದಾಬಾದ್ ಎಸ್‍ಎಸ್‍ಪಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ 2 ಲಕ್ಷ ರೂ., ಗಾಯಗೊಂಡವರ ಕುಟುಂಬದವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುವಂತೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹುಸೈನ್‍ಪುರದ ಕುಂದರ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Comments

Leave a Reply

Your email address will not be published. Required fields are marked *