ಭಾವುಕನಾಗಿದ್ದ ಮಂಜನಿಗೆ ತಬ್ಬಿಕೊಂಡು ಸಮಾಧಾನ ಹೇಳಿದ ಅರವಿಂದ್

ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ನಡೆದ ಗಡಿಗೋಪುರ ಟಾಸ್ಕ್ ವೇಳೆ ಶುಭಾ ಅವರ ಸಾರಥ್ಯದ ಜಾತ್ರೆ ಟೀಂ ಮತ್ತು ದಿವ್ಯ ಉರುಡುಗ ಮುಂದಾಳತ್ವದ ಅನುಬಂಧ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ ನಡೆದಿದೆ. ಈ ವೇಳೆ ಹಲ್ಲು ಮುರಿದುಕೊಂಡ ಜಾತ್ರೆ ಟೀಂನ ಮಂಜು ಅವರನ್ನು ಅನುಬಂಧ ತಂಡದ ಸದಸ್ಯ ಅರವಿಂದ್ ಅವರು ತಬ್ಬಿಕೊಂಡು ಸಮಾಧಾನ ಹೇಳಿದ್ದಾರೆ.

ಬಿಗ್‍ಬಾಸ್ ಕೊಟ್ಟ ಗಡಿಗೋಪುರ ಟಾಸ್ಕ್ ವೇಳೆ ಜಾತ್ರೆ ಟೀಂನ ಮಂಜು ಮತ್ತು ಅನುಬಂಧ ಟೀಂನ ರಾಜೀವ್ ನಡುವೆ ನಡೆದ ಆಟದಲ್ಲಿ ರಾಜೀವ್‍ನ ಮುಂಗೈ ಮಂಜು ಹಲ್ಲಿಗೆ ತಾಕಿ ಅರ್ಧ ಹಲ್ಲು ತುಂಡಾಗಿ ನೆಲಕ್ಕೆ ಬಿತ್ತು. ನಂತರ ಮಂಜು ಹಲ್ಲುಮುರಿದನ್ನು ಕಂಡು ತಂಡದ ಸದಸ್ಯರು ಗಾಬರಿಗೊಂಡರೆ, ಇತ್ತ ರಾಜೀವ್ ಮುಂಗೈಗಾದ ಗಾಯದಿಂದ ನರಳಾಡಿದರು. ನಂತರ ಕೆಲ ಹೊತ್ತಿನ ನಂತರ ಟಾಸ್ಕ್ ಮುಂದುವರಿಯಿತು.

ಬಣ್ಣದ ಇಟ್ಟಿಗೆ ಜೋಡಿಸುವ ಟಾಸ್ಕ್ ನಂತರ ಕೋಳಿ ಜಗಳ ಟಾಸ್ಕ್ ನಡೆಯುತ್ತದೆ. ಇದರಲ್ಲಿ ಮಂಜುವನ್ನು ಅರವಿಂದ್ ಸೋಲಿಸುತ್ತಾರೆ. ನಂತರ ಶಮಂತ್ ಅವರು ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿ ಅನುಬಂಧ ತಂಡ ಗೆಲ್ಲುವಂತೆ ಮಾಡುತ್ತಾರೆ.

ಈ ಟಾಸ್ಕ್ ಮುಗಿದ ಬಳಿಕ ಅರವಿಂದ್ ಮಂಜುವನ್ನು ತಬ್ಬಿಕೊಂಡರು. ನಂತರ ಎರಡು ನಿಮಿಷ ಹೀಗೆ ಇರು ಅಂದಾಗ ಮಂಜು ಅವರ ಕಣ್ಣಲ್ಲಿ ಕಣ್ಣೀರು ಹರಿಯತೊಡಗಿತು. ಈ ವೇಳೆ ಅರವಿಂದ್ ಏನಾಯಿತು ನೀನು ಅಳಬಾರದು ಎಂದು ಸಮಾಧಾನ ಮಾಡಿದರೆ, ನಂತರ ಅವರ ಬಳಿ ಬಂದ ಶುಭಾ ನೀನು ಈ ರೀತಿ ಆಡ್‍ಬೇಡ ಎಂದು ಹೇಳಿದರೆ, ದಿವ್ಯ ಉರುಡುಗ ನಿನಗೆ ಇದು ಸೂಟ್ ಆಗಲ್ಲ ಮಂಜ “ಡೋಂಟ್ ಡೂ ದಿಸ್” ಎಂದರು.

ನಂತರ ಬ್ರೋ ಗೌಡ ಮಂಜುವನ್ನು ನಗಾಡಿಸಲು ಪ್ರಯತ್ನಿಸಿದರು. ಈ ವೇಳೆ ಮಂಜು ಬಳಿ ಬಂದ ರಾಜೀವ್ ನೀನು ಹಲ್ಲು ಹೋಗಿರುವ ಕುರಿತು ತಲೆಕೆಡಿಸಿಕೊಳ್ಳಬೇಡ. ನೀನು ಮುಂದಿನ ಟಾಸ್ಕ್ ಬಗ್ಗೆ ಯೋಚನೆ ಮಾಡು ಎಂದು ಸಮಾಧಾನ ಮಾಡಿದರು.

Comments

Leave a Reply

Your email address will not be published. Required fields are marked *