ಭಾನುವಾರವೂ ಡಿಸಿಎಂ ಲಸಿಕೆ ರೌಂಡ್ಸ್ – ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ 1,400 ಜನರಿಗೆ ಉಚಿತ ಲಸಿಕೆ

ಬೆಂಗಳೂರು: ಆದಷ್ಟು ಬೇಗ ಮಲ್ಲೇಶ್ವರ ಕ್ಷೇತ್ರದ ಪ್ರತಿಯೊಬ್ಬರಿಗೂ ವ್ಯಾಕ್ಷಿನೇಷನ್ ಮಾಡಿಸಬೇಕೆಂದು ಸಂಕಲ್ಪ ತೊಟ್ಟಿರುವ ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭಾನುವಾರವೂ ಬೆಳಗ್ಗೆಯಿಂದ ಇಡೀ ದಿನ ಕ್ಷೇತ್ರದ ವಿವಿಧೆಡೆ ನಡೆದ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡರು.

ಇಂದು ಮೂರು ಕಡೆಗಳಲ್ಲಿ ಲಸಿಕೆ ಶಿಬಿರಗಳು ನಡೆದಿದ್ದು, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಫೌಂಡೇಶನ್ ವತಿಯಿಂದ ಲಸಿಕೆ ಖರೀದಿ ಮಾಡಿ ಉಚಿತವಾಗಿ ಜನರಿಗೆ ನೀಡಲಾಗಿಯಿತು.

ಅಶ್ವತ್ಥನಗರದಲ್ಲಿ 400, ನೇತಾಜಿ ವೃತ್ತದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 500 ಹಾಗೂ ಗಾಯತ್ರಿ ದೇವಿ ಪಾರ್ಕ್‍ನಲ್ಲಿ 500 ಲಸಿಕೆಗಳನ್ನು ಬಿಪಿಎಲ್ ಕಾರ್ಡ್‍ದಾರರು, ಬಡವರು ಮತ್ತಿತರೆ ಜನರಿಗೆ ಕೊಡಲಾಯಿತು. ಈ ಮೂರು ಕಡೆ ಒಟ್ಟು 1,400 ಲಸಿಕೆಗಳನ್ನು ನೀಡಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಜತೆಗೆ, ಗುಟ್ಟಹಳ್ಳಿಯಲ್ಲೂ ಸಾರ್ವಜನಿಕರಿಗೆ ಬಿಬಿಎಂಪಿ ಕಡೆಯಿಂದ ವ್ಯಾಕ್ಸಿನ್ ಶಿಬಿರವನ್ನು ಆಯೋಜಿಸಲಾಗಿತ್ತು. ಇಲ್ಲಿಗೂ ಡಿಸಿಎಂ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಎಲ್ಲ ಕಡೆಗೂ ಭೇಟಿ ನೀಡಿದ್ದ ವೇಳೆ ವ್ಯಾಕ್ಸಿನ್ ನೀಡುತ್ತಿದ್ದ ಮುಂಚೂಣಿ ಕಾರ್ಯಕರ್ತರ ಯೋಗ ಕ್ಷೇಮ ವಿಚಾರಿಸುವುದರ ಜತೆಗೆ, ಲಸಿಕೆ ಪಡೆಯುತ್ತಿದ್ದ ಜನರನ್ನು ಮಾತನಾಡಿಸಿದರು. ಯಾವುದೇ ಸಮಸ್ಯೆ ಇದ್ದರೂ ತಕ್ಷಣವೇ ಕರೆ ಮಾಡುವಂತೆ ತಿಳಿಸಿದರು.

ಲಸಿಕೆ ಪಡೆದವರು ಇದುವರೆಗೆ ಲಸಿಕೆ ಪಡೆಯದವರಿಗೆ ತಿಳಿ ಹೇಳಿ. ಪ್ರತಿಯೊಬ್ಬರೂ ತಪ್ಪದೇ ಲಸಿಕೆ ಪಡೆಯಬೇಕು. ಮಾರಕ ಕಾಯಿಲೆಯಿಂದ ಪಾರಾಗಲು ಇದೊಂದೇ ಪರಿಹಾರ ಎಂದು ಡಿಸಿಎಂ ಹೇಳಿದರು.

Comments

Leave a Reply

Your email address will not be published. Required fields are marked *