ಭಯೋತ್ಪಾದಕ ಸಂಘಟನೆ ಸೇರುತ್ತಿದ್ದ ಇಬ್ಬರು ಯುವಕರ ರಕ್ಷಣೆ

– ಸಾಮಾಜಿಕ ಜಾಲತಾಣದ ಮೂಲಕ ಪಾಕ್ ಉಗ್ರರ ಸಂಪರ್ಕ
– ಕೌನ್ಸಲಿಂಗ್ ಬಳಿಕ ಪೋಷಕರಿಗೆ ಯುವಕರ ಹಸ್ತಾಂತರ

ಶ್ರೀನಗರ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಸೇರುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ರಕ್ಷಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರು ಉಗ್ರರ ಸಂಪರ್ಕ ಬೆಳೆಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಇಬ್ಬರು ಯುವಕರು ಮಾರ್ಚ್ 14ರಿಂದ ಕಾಣೆಯಾಗಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ನೇಮಕಾತಿ ಹ್ಯಾಂಡ್ಲರ್‍ಗಳಿಂದ ಪ್ರಚೋದನೆಗೆ ಒಳಗಾಗಿದ್ದು, ಭಯೋತ್ಪಾದಕ ಸಂಘಟನೆ ಸೇರಲು ಮುಂದಾಗಿದ್ದರು. ಆದರೆ ಮಂಗಳವಾರ ಬುಡ್ಗಾಮ್ ಪೊಲೀಸರು ಇದನ್ನು ತಡೆದಿದ್ದು, ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ.

ಅವಂತಿಪೋರಾದ ಟ್ರಾಲ್‍ನಲ್ಲಿ ಪೊಲೀಸ್ ತಂಡ ಯುವಕರನ್ನು ರಕ್ಷಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನ ಮೂಲದ ನೇಮಕಾತಿ ಹ್ಯಾಂಡ್ಲರ್‍ಗಳು ಯುವಕರಿಗೆ ಪ್ರಚೋದನೆ ನೀಡಿ, ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲು ಯತ್ನಿಸಿದ್ದರು. ಇದೀಗ ಇಬ್ಬರು ಯುವಕರನ್ನು ಪೊಲೀಸರು ರಕ್ಷಿಸಿದ್ದು, ಕೌನ್ಸಲಿಂಗ್ ನಡೆಸಿ ಅವರ ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸೋಮವಾರ ಮಾತನಾಡಿ, ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್‍ಗಳನ್ನು ಹತ್ಯೆ ಮಾಡಲಾಗಿದ್ದು, ಇದರಿಂದ ಭಯೋತ್ಪಾದಕ ಪೀಡಿತ ಪ್ರದೇಶದ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಸೋಮವಾರ ಶೋಪಿಯಾನ್‍ನಲ್ಲಿ ಎನ್‍ಕೌಂಟರ್ ನಡೆದ ಸಂದರ್ಭದಲ್ಲಿ ಜೈಷ್-ಎ-ಮೊಹಮ್ಮದ್ ಕಮಾಂಡರ್ ಸಜ್ಜಾದ್ ಅಫ್ಘಾನಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *