ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್

ಬೆಂಗಳೂರು: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರು ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನ ನೆರವೇರಿಸಿ ಮಾನವೀಯತೆ ಮೆರೆದಿದ್ದು, ಈ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂತಿಮ ವಿಧಿ ವಿಧಾನ ನಡೆಸಲು ಕುಟುಂಬಸ್ಥರು ಯಾರೂ ಇಲ್ಲದ ಕಾರಣ ಖುದ್ದು ನಾಸೀರ್ ಹುಸೇನ್ ಅವರೇ ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಅಸ್ಥಿ ವಿಸರ್ಜನೆ ಪ್ರಕ್ರಿಯೆ ಪೂರ್ಣ ಮಾಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಜಪಾನಿ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕಿಯಾಗಿದ್ದ ಪ್ರೋ.ಸಾವಿತ್ರಿ ವಿಶ್ವನಾಥನ್ ಅವರ ಅಂತಿಮ ವಿಧಿ ವಿಧಾನವನ್ನು ನೆರವೇರಿಸುವ ಮೂಲಕ ನಾಸೀರ್ ಹುಸೇನ್ ಮಾನವೀಯತೆ ಮೆರೆದಿದ್ದಾರೆ.

ಮೂಲತಃ ತಮಿಳುನಾಡಿನ ಬ್ರಾಹ್ಮಣ ಸಮುದಾಯದರಾಗಿದ್ದ ಸಾವಿತ್ರಿ ವಿಶ್ವನಾಥನ್, ನಿವೃತ್ತಿಯ ಬಳಿಕ ತಂಗಿ ಮಹಾಲಕ್ಷ್ಮೀ ಅತ್ರಿಯಾ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೊರೊನಾ ಸೋಂಕು ತಗುಲಿದ್ದರಿಂದ ಅಕ್ಕ, ತಂಗಿ ಇಬ್ಬರೂ ಇತ್ತೀಚೆಗೆ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವಿತ್ರಿ ವಿಶ್ವನಾಥನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇವರ ತಂಗಿ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣಕ್ಕೆ ಅಂತಿಮ ಕಾರ್ಯ ನೇರವೇರಿಸಲು ಸಾಧ್ಯವಾಗಿಲ್ಲ.

ದೂರದ ಊರುಗಳಲ್ಲಿರುವ ಸಂಬಂಧಿಕರು ಸಹ ಬೆಂಗಳೂರಿಗೆ ಬರಲು ಆಗದಿರುವ ಹಿನ್ನೆಲೆ ಖುದ್ಧು ರಾಜ್ಯಸಭಾ ಸದಸ್ಯ ಡಾ.ನಾಸೀರ್ ಹುಸೇನ್ ದಂಪತಿ ಅಂತಿಮ ಕಾರ್ಯ ನೆರವೇರಿಸಿದ್ದಾರೆ. ಅಲ್ಲದೆ ಮೇ 18ರಂದು ಮೈಸೂರಿನಲ್ಲಿ ಕಾವೇರಿ ನದಿಯಲ್ಲಿ ನಾಸೀರ್ ಹುಸೇನ್ ಅವರು ಅಸ್ಥಿಯನ್ನು ವಿಸರ್ಜನೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *