ಬೈಕ್, ಲಾರಿ ನಡ್ವೆ ಅಪಘಾತ- ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದ ತಾಯಿ, ಮಗು ಸ್ಥಳದಲ್ಲೇ ಸಾವು

ರಾಯಚೂರು: ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ತಾಯಿ, ಮಗು ಸಾವನ್ನಪ್ಪಿರುವ ಘಟನೆ ರಾಯಚೂರಿನ ಎಲ್.ಬಿ.ಎಸ್ ನಗರದ ಬಳಿ ನಡೆದಿದೆ.

ರಾಯಚೂರು ತಾಲೂಕಿನ ಶಾಖಾವಾದಿ ಗ್ರಾಮದ ಈಶ್ವರಮ್ಮ (30), ವನಿತಾ (3) ಮೃತ ದುರ್ದೈವಿಗಳು.

ಈಶ್ವರಮ್ಮ ತನ್ನ ಮಗಳು ವನಿತಾ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಅಣ್ಣಮಗನೊಂದಿಗೆ ಬೈಕ್ ನಲ್ಲಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ವಾಪಾಸ್ ಶಾಖವಾದಿ ಗ್ರಾಮಕ್ಕೆ ಮರಳುತ್ತಿದ್ದಾಗ ವೇಗವಾಗಿ ಬಂದ ಲಾರಿ ಬೈಕ್‍ಗೆ ಡಿಕ್ಕಿಹೊಡೆದಿದೆ.

ಅಪಘಾತದಲ್ಲಿ ತಾಯಿ, ಮಗು ಇಬ್ಬರು ಲಾರಿಯ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಬೈಕ್ ಸವಾರ ಸೂರ್ಯಪ್ರಕಾಶ್‍ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತ ಸಂಭವಿಸುತ್ತಿದಂತ ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದು, ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *