ಬೈಕ್‍ಗೆ ಕಾರು ಡಿಕ್ಕಿ- 2 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

– ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಬೈಕ್

ರಾಯಚೂರು: ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 2 ವರ್ಷದ ಮಗು ಸೇರಿ ಮೂವರು ದಾರಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಬಳಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಬಸವರಾಜ್(28), ಪಲ್ಲವಿ(20), ಶರತ್(2) ಎಂದು ಗುರುತಿಸಲಾಗಿದೆ. ಮೃತರೆಲ್ಲ ಗುಂತಗೋಳ ಗ್ರಾಮದವರು. ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಸಾವನ್ನಪ್ಪಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೃತ ಪಲ್ಲವಿ ಹಾಗೂ ಬಸವರಾಜ ಸಹೋದರ ಸಂಬಂಧಿಗಳು. ಮೃತ ಬಾಲಕ ಶರತ್ ಬಸವರಾಜನ ಅಣ್ಣನ ಮಗ. ಬೈಕ್‍ನಲ್ಲಿ ನಾಗರಾಳದಿಂದ ಗುಂತಗೊಳ ಗ್ರಾಮಕ್ಕೆ ಮರಳುತ್ತಿದ್ದಾಗ ಯಾದಗಿರಿ ಮೂಲದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಹೊತ್ತಿ ಉರಿದಿದೆ, ಕಾರಿನ ಮುಂಭಾಗವೂ ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *