ಬೇರೆ ಜಿಲ್ಲೆಗಳಿಗಿಂತ ಬೆಂಗ್ಳೂರಿನಲ್ಲಿ ಬಿಗಿ ಕ್ರಮ – ಲಾಕ್‍ಡೌನ್ ಸುಳಿವು ನೀಡಿದ್ರಾ ಸಚಿವ ಸುಧಾಕರ್?

– ಲಾಕ್‍ಡೌನ್ ಬಗ್ಗೆ ಸೋಮವಾರ ಚರ್ಚೆ

ಬೆಂಗಳೂರು: ಬೇರೆ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಬಿಗಿ ಕ್ರಮ ತೆಗೆದುಕೊಳ್ಳಬೇಕಿದೆ. ನಾಳೆ ಎಲ್ಲ ಸಚಿವರು ಮತ್ತು ಶಾಸಕರು ಸಭೆ ಬಳಿಕ ಬಿಗಿ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳು ಅನುಮತಿ ನೀಡಲಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.

ಮಣಿಪಾಲ್ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿಗಳನ್ನ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಿಎಂ ಆರೋಗ್ಯವಾಗಿದ್ದು, ಕೊಡಬೇಕಾದ ಔಷಧ, ಚಿಕಿತ್ಸೆ ಕೊಟ್ಟಿದ್ದಾರೆ. ಈಗ ಸಿಎಂಗೆ ಜ್ವರ ಇಲ್ಲ, ಎಲ್ಲ ಪ್ಯಾರಾಮೀಟರ್ ಸರಿ ಇದೆ. ಸಿಎಂ ಇಲ್ಲಿಂದಲೇ ಅನೇಕ ಸಚಿವರ ಜೊತೆ ಫೋನ್ ಮೂಲಕ ಮಾತಾಡಿ ಸಲಹೆ ಕೊಟ್ಟಿದ್ದಾರೆ. ನಾಳೆ ಸಭೆ ಬಗ್ಗೆ ಮಾಹಿತಿ ಪಡೆದುಜಕೊಂಡಿದ್ದು, ಅನೇಕ ಸೂಚನೆ, ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಬೆಂಗಳೂರಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಲಾಕ್‍ಡೌನ್ ವಿಚಾರದ ಕುರಿತು ನಾಳಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ನಾಳೆಯ ಸಭೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮಗಳ ಚರ್ಚೆ ನಡೆಸಲು ಹೇಳಿದ್ದಾರೆ. ವಿರೋಧ ಪಕ್ಷಗಳ ಸಲಹೆಗಳನ್ನೂ ತೆಗೆದುಕೊಳ್ಳುತ್ತೇವೆ ಎಂದರು.

Comments

Leave a Reply

Your email address will not be published. Required fields are marked *