ಬೆಳ್ಳಂಬೆಳಗ್ಗೆ ಪತ್ನಿ ಜೊತೆ ಹಾಸನಾಂಬೆಯ ದರ್ಶನ ಪಡೆದ ಡಿಕೆಶಿ

– ನೋವು ಪರಿಹಾರ ಮಾಡುವಂತೆ ಪ್ರಾರ್ಥನೆ

ಹಾಸನ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಬೆಳಗ್ಗೆ 6:45ರ ಸುಮಾರಿಗೆ ಪತ್ನಿ ಜೊತೆ ಆಗಮಿಸಿದ ಡಿಕೆಶಿ, ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ದೀಪಾವಳಿ ಹಬ್ಬದ ದಿನವೇ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಹಾಸನಾಂಬೆ ದರ್ಶನ ಕೊನೆಯ ದಿನವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲಕ್ಕೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಗಿಲು ಹಾಕಲಾಗುತ್ತದೆ. ನವೆಂಬರ್ 5 ರಿಂದ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗಿತ್ತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇದೊಂದು ಪುಣ್ಯಕ್ಷೇತ್ರ, ನಂಬಿಕೆ ಪದಕ್ಕೆ ಪವಿತ್ರ ಧರ್ಮಕ್ಷೇತ್ರಗಳೇ ಸಾಕ್ಷಿ. ದೇವಿ ರಾಜ್ಯದ ಜನತೆಯ ಎಲ್ಲ ದುಃಖ ದೂರ ಮಾಡಲಿ. ನಮ್ಮಂಥವರಿಗೆ, ರಾಜ್ಯದ ಮಂದಿಗೆ ಇರುವ ಎಲ್ಲ ನೋವನ್ನು ಪರಿಹಾರ ಮಾಡಲಿ ಎಂದು ದೇವಿಯ ಪ್ರಾರ್ಥನೆ ಮಾಡಿದ್ದೇನೆ ಎಂದರು.

ಪಂಚಾಯ್ತಿ ಚುನಾವಣೆ ನಡೆಯಬೇಕು ಎಂದು ನಮ್ಮ ಪಕ್ಷದವರು ಕೋರ್ಟಿಗೆ ಹೋಗಿದ್ದೆವು. ಪಂಚಾಯ್ತಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾವು ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತೇವೆ. ಅಧಿಕಾರ ದುರುಪಯೋಗ ಆಗುತ್ತೆ. ಆದರೂ ನಮ್ಮ ಹೋರಾಟ ನಾವು ಮಾಡಬೇಕು. ನಮ್ಮ ಜನರ ಮೇಲೆ ನಂಬಿಕೆ ಇದೆ. ಅವರು ತಡ ಆದರೂ ಗೌರವ ಕೊಡುತ್ತಾರೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳು. ಎಲ್ಲರ ಬಾಳು ಬೆಳಗಲಿ ಎಂದು ಡಿಕೆಶಿ ಶುಭ ಕೋರಿದರು.

Comments

Leave a Reply

Your email address will not be published. Required fields are marked *